ಕನ್ನಡ ದಲಿತ ಕಾವ್ಯ: ಜೀತಪದ್ಧತಿ
- poorna drishti
- Feb 4
- 5 min read
ಡಾ. ಲೋಹಿತ್ ಹೆಚ್.ಎಂ.
ಸಹಾಯಕ ಪ್ರಾಧ್ಯಾಪಕರು
ಎ. ವಿ.ಕಮಲಮ್ಮ ಮಹಿಳಾ ಕಾಲೇಜು, ದಾವಣಗೆರೆ
ಈ ದೇಶದ ಬಹುದೊಡ್ಡ ದುರಂತ ಜೀತಪದ್ಧತಿ. ಸಾಮಾಜಿಕ ವಲಯದಲ್ಲಿ ಈ ಪದ್ಧತಿ ಆಳವಾದ ಕಂದಕಗಳನ್ನೇ ಸೃಷ್ಟಿ ಮಾಡಿದೆ. ಒಂದು ದೇಶದ ಆರ್ಥಿಕ ವಲಯದ ಅಧೋಗತಿಗೆ ಈ ಅಂಶ ಬಹುಮುಖ್ಯವಾದ ಕಾರಣವಾಗಿದೆ. ವ್ಯಕ್ತಿ ಸ್ವಾತಂತ್ರö್ಯದ ಹರಣವನ್ನು ಜೀತಪದ್ಧತಿ ಪ್ರತಿಬಿಂಬಿಸುತ್ತದೆ. ಭಾರತದ ಮಟ್ಟಿಗೆ ಈ ಸಮಸ್ಯೆಯನ್ನು ಹೋಲಿಸಿ ನೋಡಿದಾಗ ಬಗೆಹರಿಯಲಾಗದ ಸಮಸ್ಯೆಯಾಗಿದೆ. ಸಮಾಜದಲ್ಲಿ ಸೃಷ್ಟಿಯಾಗುವ ಅನೇಕ ಸಮಸ್ಯೆಗಳಿಗೆ ಕಾರಣೀಭೂತವಾಗಿದೆ. ಬಹುಹಿಂದಿನಿAದಲೂ ಉಳ್ಳವರು ಇಲ್ಲದವರನ್ನು, ಶೋಷಿಸಿಕೊಂಡೇ ಬಂದಿದ್ದಾರೆ. ಇಲ್ಲದವರು ಉಳ್ಳವರ ಜಮೀನಿನಲ್ಲಿ ಮನೆಯಲ್ಲಿ ಜೀತಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸಿಕೊಂಡು ಬಂದಿದ್ದಾರೆ. ಈ ಜೀತ ಪದ್ಧತಿ ಬಡವರ ಬದುಕಿನ ವ್ಯವಸ್ಥೆಯನ್ನೇ ಹಾಳು ಮಾಡಿದೆ. ಜೀತಪದ್ಧತಿ ಭಾರತ ದೇಶದಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ ಪಾಶ್ಚಾತ್ಯರಲ್ಲೂ ಇದೆ. ಆದರೆ ಬೇರೆ ಬೇರೆ ರೂಪದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಪಾಶ್ಚಾತ್ಯ ಸಂಸ್ಕೃತಿ ಊಳಿಗಮಾನ್ಯ ಪದ್ಧತಿಯ ಮೂಲಕ ಅಲ್ಲಿನ ಕರಿಯರನ್ನು ಶೋಷಿಸಿಕೊಂಡು ಬಂದಿದೆ. ಅಮೇರಿಕಾ ಆಫ್ರಿಕಾದ ಸಂದರ್ಭದಲ್ಲಿ ಗುಲಾಮಗಿರಿಯ ರೂಪವನ್ನು ಪಡೆದಿದೆ. ಇವುಗಳೆಲ್ಲದರ ಮೂಲ ಶೋಷಣೆ ದಬ್ಬಾಳಿಕೆ.
ಬಹುಪಾಲು ದಲಿತ ಜನಾಂಗದವರು ತೀರಾ ಬಡವರು. ಇವರು ತಮ್ಮ ಜೀವನವನ್ನು ಸಾಗಿಸಲು ಜಮೀನ್ದಾರರ ಮನೆಯಲ್ಲಿ ದುಡಿಯಬೇಕಿತ್ತು. ದುಡಿತಕ್ಕೆ ಸರಿಯಾದ ಪ್ರತಿಫಲ ಸಿಗುತ್ತಿರಲಿಲ್ಲ. ಇದರಿಂದಾಗಿ ಜೀವನ ಕಷ್ಟವಾಗುತ್ತಿತ್ತು. ಅನಾರೋಗ್ಯ, ಹಬ್ಬ ಹರಿದಿನಗಳಿಗೆ, ಮದುವೆ ಮುಂತಾದ ಕಾರ್ಯಗಳಿಗೆ ಬಡವರು ಜಮೀನ್ದಾರರಿಂದ ಹಣ ಪಡೆದುಕೊಳ್ಳುತ್ತಿದ್ದರು. ಈ ಹಣವನ್ನು ತೀರಿಸಲು ಜೀವನ ಪರ್ಯಂತ ಜಮೀನ್ದಾರರ ಜಮೀನಿನಲ್ಲಿ ಜೀತ ಮಾಡಬೇಕಿತ್ತು. ಜಮೀನ್ದಾರರು ತಾವು ಕೊಟ್ಟ ಹಣಕ್ಕೆ ಬಡ್ಡಿ ಚಕ್ರಬಡ್ಡಿ ಸುಸ್ತಿ ಬಡ್ಡಿಯನ್ನು ವಿಧಿಸುತ್ತಿದ್ದರು. ಈ ಕಾರಣಕ್ಕಾಗಿ ದಲಿತ ಜನಾಂಗದವರು ತಾವು ಪಡೆದ ಅಲ್ಪ ಹಣಕ್ಕೆ ಸಾಯುವ ತನಕ ಜೀತ ಮಾಡಿ ಹಣವನ್ನು ತೀರಿಸುವಂತಹ ದಾರುಣಸ್ಥಿತಿ. ಈ ಜೀತ ಪದ್ದತಿ ದಲಿತರ ಧಾರುಣ ಸ್ಥಿತಿಯನ್ನೇ ದಲಿತ ಕವಿಗಳು ತಮ್ಮ ಕಾವ್ಯಕ್ಕೆ ವಸ್ತುವಾಗಿಸಿಕೊಂಡು ಕವಿತೆಯನ್ನು ರಚಿಸಿದ್ದಾರೆ. ಇಂತಹ ಕವಿತೆಗಳನ್ನು ಆಯ್ಕೆ ಮಾಡಿಕೊಂಡು ಈ ಭಾಗದಲ್ಲಿ ಚರ್ಚೆ ಹಾಗು ವಿಶ್ಲೇಷಣೆಗೆ ಒಳಪಡಿಸಲಾಗಿದೆ.
ಸಿದ್ಧಲಿಂಗಯ್ಯನವರು ಜೀತಪದ್ಧತಿಯ ಸೃಷ್ಟಿ ಮಾಡಿರುವ ಧಾರುಣತೆಯನ್ನು ತಮ್ಮ ‘ಒಂದು ಪದ’ ಕವಿತೆಯಲ್ಲಿ ಅಭಿವ್ಯಕ್ತಿಸಿದ್ದಾರೆ.
“ನಾವ್ ಮಾತ್ರ ಇಸ್ಕೂಲ್ ಗೋಗಾಂಗಿಲ್ಲ ಜೀತಕ್ಕೋಗ್ಬೇಕು/ತಲೆ ಎತ್ತಾಂಗಿಲ್ಲ ಬಗ್ಗಗ್ಬೇಕು” ಈ ಮೇಲಿನ ಸಾಲುಗಳಲ್ಲಿ ಜೀತಗಾರ ಬದುಕಿನ ಮಕ್ಕಳ ಸ್ಥಿತಿ ಗೋಚರವಾಗುತ್ತದೆ. ಜಮೀನ್ದಾರರ ಕಪಿಮುಷ್ಠಿಯಲ್ಲಿ ಸಿಲುಕಿ ಇಡೀ ಬದುಕನ್ನೇ ಜಮೀನ್ದಾರರ ಮನೆಯಲ್ಲಿ ಸವೆಸುತ್ತಾ, ಹೊಟ್ಟೆಗೆ ಹಿಟ್ಟಿಲ್ಲದೆ ಮೈತುಂಬಾ ಬಟ್ಟೆಯಿಲ್ಲದೆ ಬದುಕುವ ದಲಿತ ವರ್ಗದವರ ನೋವಿದೆ. ಅಪ್ಪ ಮಾಡಿದ ಸಾಲವನ್ನು ತೀರಿಸಲು ಮಕ್ಕಳು ಸಹ ಜೀತ ಮಾಡಬೇಕಾಗಿತ್ತು. ಹೀಗೆ ಜೀತ ಮಾಡುವ ಮಕ್ಕಳಲ್ಲಿಯು ತಾವು ಶಿಕ್ಷಣವನ್ನು ಪಡೆಯಬೇಕೆಂಬ ಆಸೆ ಹಂಬಲವಿರುತ್ತದೆ. ಅದಕ್ಕೆ ಕವಿ ಸಿದ್ಧಲಿಂಗಯ್ಯನವರು ‘ನಾವ್ ಮಾತ್ರ ಇಸ್ಕೂಲ್ ಗೋಗಾಂಗಿಲ್ಲ ಜೀತಕ್ಕೋಗ್ಬೇಕು’ ಎಂದಿರುವುದು. ಈ ರೀತಿಯ ಆಲೋಚನೆ ಅಕ್ಷರ ಕಲಿತ ದಲಿತ ಸಮುದಾಯದ ಪ್ರಜ್ಞಾವಂತರ ಮನಸ್ಸಿನಲ್ಲಿ ಮೂಡಿರುವುದು ಒಂದು ಉತ್ತಮ ಬೆಳವಣಿಗೆ. ಈ ತೆರನಾದ ಕಾವ್ಯಗಳನ್ನು ಕಟ್ಟುವ ಮೂಲಕ ದಲಿತ ಸಮುದಾಯಕ್ಕೆ ಜಾಗೃತಿಯನ್ನು ಉಂಟು ಮಾಡಿದರು. ಆದರೆ ಇಂದಿಗೂ ಜಮೀನ್ದಾರರ ದರ್ಪ, ದಬ್ಬಾಳಿಕೆಯ ವಿರುದ್ಧ ತಿರುಗಿ ಬಿದ್ದರೂ ಜಮೀನ್ದಾರರ ಸೊಕ್ಕು ಅಡಗಿಲ್ಲ.
“ಕೂಲೀಗ್ ಕರೀಬ್ಯಾಡಿ ದುಡಿಯಾಕ್ಯಳೀ ಬ್ಯಾಡಿ/ಕ್ವಳ್ಚೆ ಜಾಗ್ದೇರ್ ಮುಲುಗ್ಸಿ ಕಕ್ಕಸ್ ಪೈಪ್/ಇತ್ ಕಡೀಕ್ ತಿರುಗುಸ್ಬಾö್ಯಡಿ
ಜೀತ್ ಸಾಲ ಬಡ್ಡಿ ಚಪ್ಪಡಿ ಏರಿ, ಅಪ್ಪಚ್ಚಿ/ ಮಾಡಿ ಆಡ್ಕಂಡ್ ನಗಬ್ಯಾಡಿ”
ದಲಿತರು ಬಡತನದ ಬೇಗೆಯಲ್ಲಿ ಬೇಯುತ್ತಿರುವುದು ಹೊಟ್ಟೆಪಾಡಿಗಾಗಿ ಉಳ್ಳವರಿಂದ ಪಡೆದ ಸಾಲವನ್ನು ತೀರಿಸಲಾಗದೆ ಅವರು ಹೇರಿದ ಬಡ್ಡಿ, ಚಕ್ರಬಡ್ಡಿಗಾಗಿ ಜೀವನ ಪರ್ಯಂತ ದುಡಿಯಬೇಕಾಗುತ್ತದೆ. ಹೀಗೆ ದುಡಿದರೂ ಸಹ ಕೊಟ್ಟ ಅಸಲು ಹಣ ಮಾತ್ರ ಹಾಗೆಯೇ ಉಳಿಯುತ್ತದೆ. ಇದರಿಂದಾಗಿ ಜೀತ ಮಗನಿಗೆ, ಮೊಮ್ಮಗನಿಗೆ ಹೀಗೇ ಮುಂದುವರಿಯುತ್ತದೆ. ಈ ಮಾತಿಗೆ ಪೂರಕವೆನ್ನುವಂತಹ ಕವಿತೆಯನ್ನು ಮ.ನ.ಜವರಯ್ಯನವರು ‘ಮೂಲ’ ಕವಿತೆಯಲ್ಲಿ ಹೇಳಿದ್ದಾರೆ.
“ಮತ್ತೆ ಅಗೆದು ತಡುಕುತ್ತೇನೆ/ಬೇರಿನ ಮೂಲ ಹಿಡಿದು/ಸಾಹುಕಾರನ ಮನೆಗೆ-
ಸಾಯೋತನಕ ಸೌದೆ ಹೊತ್ತರೂ/ಬಡ್ಡಿಯೋ ತೀರಲಿಲ್ಲವೆಂಬೀ-/ತಾತನ ಕಾಲದ ಹಳೆಮರವ
ಬುಡಮುಟ್ಟ ಉರುಳಿಸಿ/ಘನವಾದ ಕಟ್ಟಡವ ಕಟ್ಟಿ/ಸರಿಕರೆದುರಿಗೆ ಹೊಸ ಸಂಸಾರವ ಹೂಡುತ್ತೇನೆ.”
ಸಾಹುಕಾರರು ತಾವು ನೀಡಿದ ಹಣಕ್ಕೆ ಬಡ್ಡಿಯನ್ನು ಸೇರಿಸಿ ಸೇರಿಸಿ ಜೀವನವಿಡೀ ದುಡಿದರು ಸಾಲ ತೀರಲಿಲ್ಲವೆನ್ನುತ್ತಿದ್ದುದು ಸತ್ಯವಾದ ಸಂಗತಿ. ದಲಿತರಿಗೆ ಅಕ್ಷರದ ಜ್ಞಾನವಿರಲಿಲ್ಲ. ಈ ಕಾರಣದಿಂದಾಗಿ ಸಾಹುಕಾರರು ನೀಡಿದ ಸಾಲದ ಬಗ್ಗೆ, ಬಡ್ಡಿಯ ಬಗ್ಗೆ ಅರಿವು ಸಹ ಇರಲಿಲ್ಲ. ಸಾಹುಕಾರ ಹೇಳಿದ್ದೇ ಲೆಕ್ಕವಾಗಿತ್ತು. ಈ ಮೇಲಿನ ಕವಿತೆಯಲ್ಲಿ ಮ.ನ.ಜವರಯ್ಯನವರು ಸಾಹುಕಾರರ ಜೀತ ಪದ್ಧತಿಯ ವಿರುದ್ಧ ಪ್ರತಿಭಟಿಸಿದ್ದಾರೆ. ಸಾಹುಕಾರರು ತಾತನ ಕಾಲದಿಂದಲೂ ಹೇಳಿಕೊಂಡು ಬಂದಿರುವ ತಪ್ಪು ಲೆಕ್ಕಾಚಾರದ ವಿರುದ್ಧ ಪ್ರತಿಭಟಿಸಿ ಅದನ್ನು ಸರಿಪಡಿಸಿ ನೆರೆಹೊರೆಯವರ ಎದುರು ಹೊಸ ಸಂಸಾರವನ್ನು ಕಟ್ಟುತ್ತೇನೆ ಎಂದಿದ್ದಾರೆ. ಈ ರೀತಿಯ ವಿರೋಧ ಶೋಷಣೆಗೆ ಒಳಗಾದ ದಲಿತ ಸಮುದಾಯದವರಲ್ಲಿ ಸ್ಥಾಯಿಯಾಗಿಯೇ ಇರುತ್ತದೆ. ಆದರೆ ಪ್ರತಿರೋಧ ಒಡ್ಡುವ ಮನಸಿದ್ದರೂ ಅಸಹಾಯಕ ಸ್ಥಿತಿ ದಲಿತರದ್ದು.
“ಗೇದ ಕೂಲಿ ಕೇಳಿದ/ಹೊಲೆ ಮಾದಿಗರನು/ಎಲ್ಲಿ ಕೊಂದರೆAಬುದ ಕಂಡರೆ ನನ್ನೊಮ್ಮೆ/
ಕರೆದು ತೋರಿರಿ ಕರೆದು ತೋರಿರಿ”
ಕೂಲಿಯನ್ನು ಕೇಳಿದ್ದಕ್ಕೆ ದಲಿತರನ್ನು ಧಾರುಣವಾಗಿ ಕೊಲೆ ಮಾಡಿದ ಶೋಷಿಸಿದ ನಿದರ್ಶನಗಳಿವೆ. ಇನ್ನೂ ಜೀತಮಾಡಿಕೊಂಡು ಬದುಕು ಸವೆಸುತ್ತಿದ್ದ ದಲಿತನು ಕೂಲಿ ಕೇಳಿದರೆ ಅವನ ಪರಿಸ್ಥಿತಿ ಯಾವ ರೀತಿಯದಾಗಿತ್ತು ಎಂಬುದನ್ನು ಊಹಿಸಲು ಅಸಾಧ್ಯ. ಈ ಕವಿತೆಯಲ್ಲಿ ಮ.ನ.ಜವರಯ್ಯನವರು ಕೂಲಿ ಕೇಳಿದ್ದಕ್ಕೆ ಕೊಂದ ದಲಿತರನ್ನು ಕಂಡರೆ ಹೇಳಿ ಎನ್ನುವಲ್ಲಿ, ದಲಿತ ಸಮುದಾಯದ ಜನರ ಮೇಲೆ ನಡೆದ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವ ಮನಸ್ಸು ಇದೆ. ಈ ರೀತಿ ಅನ್ಯಾಯ ನಡೆದ ಸಂದರ್ಭದಲ್ಲಿ ದಲಿತ ಸಮುದಾಯದ ಪ್ರಜ್ಞಾವಂತ ಮನಸ್ಸುಗಳು ಒಟ್ಟಾಗಿ ಅದರ ವಿರುದ್ಧ ಹೋರಾಟ ಮಾಡಿದರೆ ಜಮೀನ್ದಾರರಿಗೂ ಭಯವಿರುತ್ತದೆ. ಏಕೆಂದರೆ ಕೇಳುವವರೆ ಇಲ್ಲವಾದರೆ ಅವರ ದರ್ಪ ಇನ್ನೂ ಇಮ್ಮಡಿಗೊಳ್ಳುತ್ತದೆ.
“ಕಳ್ಳತನವಾದರೆ ಕಟ್ಟುವರು ಕಂಬಕ್ಕೆ/ಜೀವವಿಲ್ಲದ ಜೀತದಾಳುಗಳನು/ಕೂಲಿ ಕೇಳದ ಜನರ ಗೋಣು ಕಂಬದ ಕೆಳಗೆ/ ಹಸಿವಿನಲಿ ಅಳುವವರು ಲೆಕ್ಕವಿಲ್ಲವು ಒಳಗೆ/ ಪ್ರಾಣಿ ಪಕ್ಷಿಗಳಂತೆ ಸಾಯುವರು ಜನರಿಲ್ಲಿ”
ಜಮೀನ್ದಾರಿ ವರ್ಗದವರ ದರ್ಪದ ಇನ್ನೊಂದು ಮುಖವು ಇಲ್ಲಿ ಅನಾವರಣಗೊಂಡಿದೆ. ಊರಿನಲ್ಲಿ ಅಥವಾ ಶ್ರೀಮಂತರ ಮನೆಗಳಲ್ಲಿ ಕಳ್ಳತನವಾದರೆ ಜೀತಗಾರರನ್ನು ಕಂಬಕ್ಕೆ ಕಟ್ಟಿ ಹೊಡೆದು ಹಿಂಸೆ ಮಾಡಿದ ನಿದರ್ಶನಗಳಿವೆ. ಇಲ್ಲಿ ಕದ್ದ ವ್ಯಕ್ತಿಯೇ ಬೇರೆ ಆದರೆ ಅನುಭವಿಸುವವರು ದಲಿತ ಸಮುದಾಯದ ಜೀತಗಾರರು. ಎಲ್ಲರ ದೃಷ್ಟಿಯಲ್ಲಿ ತಿರಸ್ಕಾರಕ್ಕೆ ಗುರಿಯಾಗಿದ್ದ ಜೀತಗಾರರು ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಕೂಲಿ ಕೇಳಿದ ಜನರನ್ನು ಸಹ ಜಮೀನ್ದಾರರು, ಶ್ರೀಮಂತ ವರ್ಗದವರು ನೇಣು ಹಾಕಿ ಸಾಯಿಸುತ್ತಿದ್ದ ಧಾರುಣ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ದಲಿತ ಸಮುದಾಯದ ಜನ ಬದುಕುತ್ತಿದ್ದರು. ಇಂತಹ ಅನೇಕ ರೀತಿಯ ಶೋಷಣೆಗಳನ್ನು ದಲಿತ ಸಮುದಾಯದ ಜನರು ಅನುಭವಿಸಿಕೊಂಡು ಬಂದಿದ್ದಾರೆ. ಎಲ್. ಹನುಮಂತಯ್ಯನವರೇ ‘ಅಪ್ಪಾ’ ಕವಿತೆಯಲ್ಲಿ ಅಪ್ಪನ ಜೀವನ ಜೀತದಲ್ಲಿ ಕಳೆದ ರೀತಿಯನ್ನು ಹೀಗೆ ಹೇಳಿದ್ದಾರೆ.
“ಹಣೆಯ ಮೇಲಿನ ಸುಕ್ಕು ಮೈಯ ಒಳಗಿನ ದೊಕ್ಕು/ಹೇಳುತ್ತದೆನೂರಾರು ಇತಿಹಾಸ ನನಗೆ
ಹರೆಯದರ್ಧಾಜೀವ ಜೀತದಲಿ ಸವೆದಿತ್ತು/ ಉಳಿದರ್ಧ ಜೀವನವು ಮಣ್ಣಿನಲಿ ಮರವಾಯ್ತು”
ಇಲ್ಲಿ ಎಲ್. ಹನುಮಂತಯ್ಯನವರು ಅಪ್ಪನ ಚಿತ್ರಣವನ್ನು ಕಟ್ಟಿಕೊಡುವಾಗ ದಮನಕ್ಕೊಳಗಾದ ಜನಾಂಗದ ಪ್ರತಿನಿಧಿಯಾಗಿ ಚಿತ್ರಿಸಿದ್ದಾರೆ. ಈ ಮೂಲಕ ದಲಿತ ಚರಿತ್ರೆಯನ್ನು ರೂಪಿಸುವ ಪ್ರಯತ್ನವನ್ನು ಸೂಚಿಸುತ್ತದೆ. ಹಣೆಯ ಮೇಲಿನ ಸುಕ್ಕು ಎನ್ನುವಲ್ಲಿ ದಲಿತರು ದುಡಿದು-ದುಡಿದು ದೈಹಿಕವಾಗಿ ಬಳಲಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಜೀತಗಾರನಾಗಿರುವ ಅಪ್ಪ ತನ್ನ ಅರ್ಧಜೀವನವನ್ನು ಜೀತಮಾಡಿಯೇ ಸವೆಸಿರುತ್ತಾನೆ. ಈ ಮೇಲಿನ ಕವಿತೆಯಲ್ಲಿ “ಅಪ್ಪನ ಚಿತ್ರ ಕೇವಲ ಅಪ್ಪನ ಚಿತ್ರವಲ್ಲ ಒಂದು ಸಮುದಾಯದ ಬದುಕಿನ ಚಿತ್ರ. ಚರಿತ್ರೆಯ ವಾಸ್ತವ ಸತ್ಯ ವೈಯಕ್ತಿಕ ದನಿ ಇಲ್ಲಿ ಸಮುದಾಯದ ದನಿಯಾಗಿ ಹೆಚ್ಚು ಶಕ್ತಿಯುತವಾಗುತ್ತದೆ. ಜೊತೆಗೆ ಸಮುದಾಯವನ್ನು ವೈಯಕ್ತಿಕ ನೆಲೆಯಲ್ಲಿ ವ್ಯಾಖ್ಯಾನಿಸುವ ಮೂಲಕ ಅದಕ್ಕೊಂದು ಅಥೆಂಟಿಸಿಟಿಯನ್ನು ಆಪ್ತತೆಯನ್ನು ಹನುಮಂತಯ್ಯ ತಮ್ಮ ರಚನೆಯ ವಿನ್ಯಾಸದಲ್ಲಿ ತಂದುಕೊಟ್ಟಿದ್ದಾರೆ.” (ಡಾ.ಎಲ್.ಹನುಮಂತಯ್ಯ, ‘ಕಳ್ಳಿ ಹಾಲಿನ ಕಡಲು’, ಮುನ್ನುಡಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಚಾರುಮತಿ ಪ್ರಕಾಶನ ಬೆಂಗಳೂರು, ೨೦೦೯, ಪುಟ ೯-೧೦)
ಡಾ. ಮುನಿವೆಂಕಟಪ್ಪನವರ ‘ಜೀತದ ಗೀತ’ಕವಿತೆಯಲ್ಲಿ ಜೀತಗಾರನ ಸ್ಥಿತಿಯನ್ನು ನೈಜವಾಗಿ ಚಿತ್ರಿಸಿದ್ದಾರೆ.
“ಯಜಮಾನರ ಹಟ್ಟಿಯಲ್ಲಿ/ಅವಮಾನದ ಆಳದಲ್ಲಿ/ಹಳಸಿದನ್ನ ಆಹಾರದಲ್ಲಿ/ಅವ್ವ ಅಪ್ಪ ಜೀತದಲ್ಲಿ
ದಣಿಯ ಹಟ್ಯಾಗ ದುಡಿದುಡಿದು ನಾವು/ಬೇಲಿಯಾಗಿ ನಿಂತವರು/ ದಣಿಯ ದರ್ಪದಲ್ಲಿ ಬೆಂದೆವು ನಾವು
ಅವರ ಗರ್ಜನೆಯಲಿ ಮೂಕರು”
ಈ ಮೇಲಿನ ಕವಿತೆಯಲ್ಲಿ ಜೀತಗಾರನ ಅಸಹಾಯಕ ಸ್ಥಿತಿಯನ್ನು ನಿರೂಪಿಸಿಲಾಗಿದೆ. ದಲಿತರು ಯಜಮಾನರ ಮನೆಯಲ್ಲಿ ಜೀತ ಮಾಡಿಕೊಂಡು ಅವಮಾನವನ್ನು ಅನುಭವಿಸಬೇಕಿತ್ತು. ಅವರು ನೀಡುವ ಹಳಸಲು ಆಹಾರವನ್ನು ಸೇವಿಸಬೇಕಿತ್ತು ಯಜಮಾನರ ವಿರುದ್ಧ ದನಿಯೆತ್ತುವಂತಿರಲಿಲ್ಲ. ಶ್ರೀಮಂತರ ಜಮೀನ್ದಾರರ ಮನೆಯಲ್ಲಿ ದುಡಿದು ಅವರನ್ನು ರಕ್ಷಣೆ ಮಾಡುತ್ತ ಅವರ ಬೆಂಬಲವಾಗಿದ್ದರು ದಲಿತರು. ಇಷ್ಟೆಲ್ಲಾ ಮಾಡಿದರು, ದಲಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಿದ್ದರು. ಇವರ ದಬ್ಬಾಳಿಕೆಯನ್ನು ನೋಡಿ ದಲಿತ ಜನರು ಮೂಕವಾಗುತ್ತಿದ್ದರು. ಈ ರೀತಿಯಾದ ಚಿತ್ರಣಗಳು ಇಡೀ ದಲಿತ ಸಮುದಾಯದವರು ಅನುಭವಿಸಿದ ನೈಜ ಚಿತ್ರಣವಾಗಿವೆ. ಈ ಮಾತಿಗೆ ಪೂರಕವೆನ್ನುವಂತೆ ‘ಕಾಡು ಜನರ ಹಾಡು’ ಕವಿತೆಯಲ್ಲಿ ಬಿ.ಟಿ.ಲಲಿತಾನಾಯಕ್ ರವರು ಜೀತದ ಬಗ್ಗೆ ಚಿತ್ರಿಸಿದ್ದಾರೆ.
“ಕಟ್ಟಿಗೆ ಕಡಿದೆವು ಇಟ್ಟಿಗೆ ಹೊತ್ತೆವು/ಜೀತವ ಗೇಯ್ದೆವು ದಿನವೆಲ್ಲಾ/ಮಳೆ ಬಿಸಿಲೆನ್ನದೆ ದುಡಿದು ದಣಿದೆವು
ಬೆವರಿಗೆ ಬೆಲೆಯೋ ಸಿಗಲಿಲ್ಲ”
ದಲಿತರು ಜೀತ ಮಾಡಿದರು ಅದಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ದುಡಿಸಿಕೊಳ್ಳುವವರು ದಲಿತರನ್ನು ಅವರ ಅನುಕೂಲಕ್ಕೆ ತಕ್ಕ ಹಾಗೆ ಬಳಸಿಕೊಳ್ಳುತ್ತಾರೆ. ಆದರೆ, ದುಡಿದ ದುಡಿತಕ್ಕೆ ತಕ್ಕ ಫಲವನ್ನು ನೀಡುವುದಿಲ್ಲ. ದಲಿತರು ಯಾವ ಹಂಗಿಲ್ಲದೆ ಬಿಸಿಲು, ಮಳೆ ಎನ್ನದೆ ದುಡಿದು ಬೆವರು ಹರಿಸಿದರು ಅವರ ಬೆವರಿಗೆ ತಕ್ಕ ಪ್ರತಿಫಲವನ್ನು ಕಾಣಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿ ದೇಶದ ಎಲ್ಲಾ ದಲಿತ ಸಮುದಾಯದ ಜನರ ನೋವು ಸಹ ಹೌದು. “ಬಡತನ ಮತ್ತು ಜೀತ ಪದ್ಧತಿ ದಲಿತರ ಬೆನ್ನಿಗೆ ಅಂಟಿಕೊAಡಿರುವ ಬದುಕಿನ ಸವಾಲುಗಳು. ಇವಕ್ಕಾಗಿಯೇ ಒಡೆಯರ ಮನೆ ಹೊಲಗಳಲ್ಲಿ ಹಗಳಿರುಳು ದುಡಿದು ಹೊಟ್ಟೆಗೆ ಹಿಟ್ಟು, ಮೈ ಮೇಲೆ ಬಟ್ಟೆ ಇಲ್ಲದೆ ಬದುಕುವುದು ಒಂದು ಬದುಕೇ? ಎಂದು ಪ್ರಶ್ನಿಸಿದ ಕವಿ ಅವರ ದಕ್ಷÀ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಮೆಚ್ಚಿದ್ದಾರೆ. ಅವರು ಸುರಿಸಿದ ಬೆವರ ಹನಿಗಳು. ಆ ಹನಿಹಳಿಂದ ಬೆಳೆದ ಫಸಲು ಒಡೆಯರ ಮನೆ ಮಹಡಿಗಳಲ್ಲಿ ತುಂಬಿ ತುಳುಕುತ್ತದೆ. ಇಷ್ಟಿದ್ದರೂ ಅವರಿಗೆ ಒಡೆಯರ ದರ್ಪ ದೌರ್ಜನ್ಯಗಳು ಬೇರೆ” ( ಅರವಿಂದ ಮಲಗತ್ತಿ, ‘ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ’, ಸಂಪುಟ ೫, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು.ವಿ.ವಿ, ೨೦೧೪, ಪುಟ ೨೪೬) ಶ್ರೀಮಂತರ ಭೂಮಾಲೀಕರನ್ನು ಉದ್ದೇಶಿಸಿ ಸಿದ್ಧಲಿಂಗಯ್ಯನವರು ‘ಬೆಲ್ಜಿಯ ಹಾಡು’ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ.
“ದೊಡ್ಡ ಗೌಡರ ಬಾಗಿಲೀಗೆ/ನಮ್ಮ ಮೂಳೆಯ ತ್ವಾರಣ/ನಮ್ಮ ಜನಗಳ ಕಾಲುಕಯ್ಯಿ/ಕಂಬ ಅವರ ಹಟ್ಟಿಗೆ
ಅವರ ಬೇಟಿಗೆ ನಾವು ಮೊಲಗಳು/ನಮ್ಮ ಬಾಳೇ ಬಂಗಲೆ/ಅವರ ಬಂಗಲೆಯAಗಳಕ್ಕೆ/ ನಮ್ಮ ರಕ್ತದ ರಂಗಾ¯”ೆ
ಬಿಹಾರ ರಾಜ್ಯದ ‘ಬೆಲ್ಚಿ’ ಮತ್ತು ‘ಪರಿತ್’ ಎಂಬ ಗ್ರಾಮಗಳಲ್ಲಿ ಭೂಮಾಲೀಕ ಮೇಲ್ಜಾತಿಯವರು ಜೀತದಾಳುಗಳಾದ ಅಮಾಯಕ ದಲಿತರ ಸುಮಾರು ಎಂಟು ಜನರನ್ನು ಅವರ ಜೋಪಡಿಗಳಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದರು. ಘಟನೆಯ ಹಿನ್ನೆಲೆಯಲ್ಲಿ ಸಮುದಾಯ ತಂಡದವರಿಗೆ ‘ಬೆಲ್ಚಿ’ ಎಂಬ ಬೀದಿ ನಾಟಕಕ್ಕೆ ಸಿದ್ಧಲಿಂಗಯ್ಯನವರು ರಚಿಸಿಕೊಟ್ಟ ಹಾಡೇ ‘ಬೆಲ್ಚಿಯ ಹಾಡು’, “ದೊಡ್ಡಗೌಡ ಎಂಬ ಪದ ಪ್ರಯೋಗ ಕೇವಲ ಜಾತಿಸೂಚಕ ಪದವಾಗಿ ಬಳಕೆಯಾಗದೆ, ಇಡೀ ದೇಶದ ಭೂಮಾಲೀಕರ, ಶ್ರೀಮಂತರ, ಶೋಷಕರ ಮತ್ತು ಬಂಡವಾಳಗಾರರನ್ನು ಪ್ರತಿನಿಧಿಸುವ ಪದಪ್ರಯೋಗವಾಗಿದೆ. ಜಮೀನ್ದಾರರ ಅರಮನೆಯಂತಹ ಬಂಗಲೆಗಳಲ್ಲಿ ನೂರಾರು ವರ್ಷಗಳಿಂದ ಜೀತದಾಳುಗಳಾಗಿ ದುಡಿದು ಹೆಣವಾದ ಕೂಲಿ ಶ್ರಮಿಕರು ಗುಡಿಸಲುಗಳನ್ನು ಕಟ್ಟಿಕೊಳ್ಳುವ ಹಕ್ಕನ್ನು ಕಳೆದುಕೊಂಡವರು.”
“ಇದ್ದ ಕೊರೆ ಬೀಡಿಗೆ ಕಡ್ಡಿ ಗೀರಿ/ಬುಡ್ಡಿ ಬೆಳಕಲಿ ಬಂದುಕೂತು/ಅವ್ವನ ಪಕ್ಕ ನಗುತ್ತಿದ್ದ/ಅಪ್ಪನ ದುಡಿಮೆಗೆ ಬಾಯಿ ಬರಲಿಲ್ಲ/ಅಪ್ಪನ ಪ್ರೀತಿಗೆ ಮಾತೇ ಇರಲಿಲ್ಲ”
ಈ ಕವಿತೆಯಲ್ಲಿ ದುಡಿಯುವ ವರ್ಗದ ಸುಖ-ಸಂತೋಷ ಸಂಬAಧ ವಿಡಂಭನೆಯನ್ನು ಕಾಣಬಹುದು. ಮಳೆಯ ಹನಿಗಳ ಮೂಲಕ ಪ್ರಕೃತಿಯನ್ನು ಬಡವರೊಡಲಿನ ಬೆಂಕಿಯನ್ನು ಆರಿಸಿಕೊಂಡಿರುವುದು ಇಲ್ಲಿನ ಕಾವ್ಯದ ವೈಶಿಷ್ಟö್ಯ. ತುಂಡು ಬೀಡಿ ಚಳಿಯನ್ನು, ಚಟವನ್ನು, ನೋವನ್ನು ಮರೆಸುವ ಸಾಧನವಾಗಿದೆ. ಶ್ರೀಮಂತರಲ್ಲಿ ಧೂಮಪಾನ ಷೋಕಿಯ ಸಂಕೇತವಾದರೆ ಬಡವರಲ್ಲಿ ಚಟವಾಗಿ, ನೋವನ್ನು ಮರೆಸುವ ಸಾಧನವಾಗುತ್ತದೆ. ಈ ಕವಿತೆ ದುಡಿಯುವ ವರ್ಗದ ಅಸಹಾಯಕ ಸ್ಥಿತಿಯನ್ನು ತೆರೆದಿಡುತ್ತದೆ. ಅಪ್ಪನ ದುಡಿಮೆಗೆ ಬಾಯಿ ಬರಲಿಲ್ಲ ಅಪ್ಪನ ಪ್ರೀತಿಗೆ ಮಾತೇ ಇರಲಿಲ್ಲ ಎನ್ನುವಲ್ಲಿ ಅಸಹಾಯಕ ಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಜೀತ ಪದ್ಧತಿ ದಲಿತರಿಗೆ ಅಂಟಿಕೊAಡಿರುವ ರೋಗ, ದಲಿತರು ಶತ ಶತಮಾನಗಳಿಂದಲೂ ಶ್ರೀಮಂತರ ಜಮೀನ್ದಾರರ ಮನೆಗಳಲ್ಲಿ ಜೀತಮಾಡಿ ತಮ್ಮ ಜೀವನವನ್ನು ನಡೆಸಬೇಕಾಗಿದೆ. ಸಾಹುಕಾರರು ನೀಡುವ ಅಲ್ಪ ಮೊತ್ತಕ್ಕೆ ಬಡ್ಡಿ ಚಕ್ರಬಡ್ಡಿ ವಿಧಿಸಿ ದಲಿತರನ್ನು ಶಾಶ್ವತವಾಗಿ ಜೀತಮಾಡುವ ಹಾಗೆ ಮಾಡುತ್ತಿದ್ದರು. ಇಂದಿಗೂ ಈ ಜೀತಪದ್ಧತಿ ಜೀವಂತವಾಗಿದೆ. ದಲಿತರಿಗೆ ಅಲ್ಪ ಹಣವನ್ನು ನೀಡಿ ಇಂತಿಷ್ಟು ವರ್ಷಕ್ಕೆಂದು ಜೀತಕ್ಕೆ ಇಟ್ಟುಕೊಳ್ಳುವ ಪದ್ಧತಿ ಇಂದಿಗೂ ಹಳ್ಳಿಗಳಲ್ಲಿ ಜೀವಂತವಿದೆ. ಮುಗ್ಧ ದಲಿತರು ತಮ್ಮ ದುಡಿತಕ್ಕೆ ಸರಿಯಾದ ಪ್ರತಿಫಲವನ್ನು ನಿರ್ಧಾರ ಮಾಡುವ ಪ್ರಜ್ಞೆಯಿಲ್ಲದವರಾಗಿದ್ದಾರೆ ಈ ಕಾರಣದಿಂದಲೇ ಶ್ರೀಮಂತರು ಜಮೀನ್ದಾರರು ದಲಿತರನ್ನು ಮೋಸ ಮಾಡುತ್ತಿರುವುದು ಈ ನಿಕೃಷ್ಟ ಜೀತ ಪದ್ಧತಿಯಿಂದ ದಲಿತರು ಇಂದಿಗೂ ನರಳುವ ಪರಿಸ್ಥಿತಿಯಿದೆ.
ಕನ್ನಡ ದಲಿತ ಕಾವ್ಯ: ಜೀತಪದ್ಧತಿದಲಿತ ಸಮುದಾಯದವರು ಬಹುಪಾಲು ಒಪ್ಪತ್ತಿನ ಕೂಳಿಗಾಗಿ ಜೀತಗಾರರಾಗಿರುವರು, ಹಿರಿಯರಿಂದ ಪರಂಪರಾಗತವಾಗಿ ಬಂದ ವ್ಯವಸ್ಥೆಯನ್ನು ಧಿಕ್ಕರಿಸದೆ ಜೀತಗಾರರಾದವರು. ಸಾಲಮಾಡಿ ತೀರಸಲಾಗದೆ ಬಡ್ಡಿ, ಚಕ್ರಬಡ್ಡಿಗಾಗಿ ಜೀವನವನ್ನೇ ಸವೆಸುವವರು. ಇನ್ನೂ ಮುಂತಾದ ಜೀತಪದ್ಧತಿಗೆ ಕಾರಣವಾದ ಅಂಶಗಳಿವೆ. ಜೀತ ಪದ್ಧತಿಗೆ ಒಳಗಾದ ದಲಿತರ ಸ್ಥಿತಿ ಶೋಚನೀಯ. ಈ ಎಲ್ಲವುಗಳನ್ನು ತಮ್ಮ ಕಾವ್ಯದಲ್ಲಿ ವಸ್ತುವಾಗಿಸಿಕೊಂಡು ದಲಿತ ಕವಿಗಳು ಕಾವ್ಯವಾಗಿಸಿದ್ದಾರೆ. ಈ ಮೇಲಿನಂತೆ ಚರ್ಚಿಸಲಾಗಿರುವ ಕವಿತೆಗಳಿಂದ ಜೀತಪದ್ಧತಿಯ ಕರಾಳಮುಖ ಅದನ್ನು ಅನುಭವಿಸಿದ ದಲಿತರ ಸ್ಥಿತಿಯನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ.
ಪರಾಮರ್ಶನ ಗ್ರಂಥಗಳು :
ಮ.ನ.ಜವರಯ್ಯ, ‘ವಿದ್ರೋಹ’, ಬಹುಜನ ಮಾಧ್ಯಮ ಕೇಂದ್ರ ಮೈಸೂರು, ೨೦೦೧.
ಎಲ್.ಹನುಮಂತಯ್ಯ, ‘ಕಳ್ಳಿ ಹಾಲಿನ ಕಡಲು’. ಚಾರುಮತಿ ಪ್ರಕಾಶನ ಬೆಂಗಳೂರು, ೨೦೦೯.
ಪಿ.ಲಂಕೇಶ್, (ಸಂ) ‘ಅಕ್ಷರ ಹೊಸ ಕಾವ್ಯ’, ಲಂಕೇಶ್ ಪ್ರಕಾಶನ ಬೆಂಗಳೂರು’.
ಬಿ.ಟಿ.ಲಲಿತಾನಾಯಕ್, ‘ಬಿದಿರು ಮಳೆ ಕಂಟಿಯಲಿ’, ಅಂಕಿತ ಪ್ರಕಾಶನ ಬೆಂಗಳೂರು, ೧೯೯೭.
ಚೆನ್ನಣ್ಣ ವಾಲೀಕಾರ, ‘ಸಮಗ್ರ ಕಾವ್ಯ ಸಂಪುಟ’’ ದಲಿತ ಬಂಡಾಯ ಸಾಹಿತ್ಯ ಪ್ರಕಾಶನ, ಕೇಂದ್ರ ಗುಲ್ಬರ್ಗಾ, ೨೦೦೩.
ಬಿ.ಟಿ ಲಲಿತಾನಾಯಕ್, ‘ಬಿದಿರು ಮಳೆ ಕಂಟಿಯಲಿ’, ಅಂಕಿತ ಪ್ರಕಾಶನ ಬೆಂಗಳೂರು, ೧೯೯೭.
ಮೊಗಳ್ಳಿ ಗಣೇಶ್, ‘ಜಾತಿ ಮೀಮಾಂಸೆ’, ಅಭಿನವ ಬೆಂಗಳೂರು, ೨೦೧೫.
ಅರವಿಂದ ಮಾಲಗತ್ತಿ, ‘ಮೂಕನಿಗೆ ಬಾಯಿ ಬಂದಾಗ’, ಶೈಲ ಪ್ರಕಾಶನ ಮುದ್ದೇಬಿಹಾಳ.
ಸತ್ಯಾನಂದ ಪಾತ್ರೋಟ, ‘ಕಲ್ಲಿಗೂ ಗೊತ್ತಿರುವ ಕತೆ’, ಸಮತಾ ಪ್ರಕಾಶನ ಬಾಗಲಕೋಟೆ.
コメント