top of page

ಭಾಗವಂತಿಕೆ ಸಂಪ್ರದಾಯಕ್ಕೆ ಉಪ್ಪಾರಹಳ್ಳಿಯ ಕೊಡುಗೆ

ಉಮೇಶ ಹೆಚ್.ಜಿ

ಸಂಶೋಧನಾ ವಿದ್ಯಾರ್ಥಿ

ಮೈಸೂರು ವಿಶ್ವವಿದ್ಯಾನಿಲಯ

ಎಸ್.ಜೆ.ಬಿ.ಸಿ.ಎಂ.ಎಸ್‌ ಕನ್ನಡ ಸಂಶೋಧನಾ ಕೇಂದ್ರಕೆಂಗೇರಿ, ಬೆಂಗಳೂರು-60

ಡಾ. ಬಸವರಾಜು ಕೆ. ಬಿ.

ಪ್ರಾಧ್ಯಾಪಕರು ಹಾಗೂ ಮಾರ್ಗದರ್ಶಕರು

ಕನ್ನಡ ವಿಭಾಗ. ಎಸ್.ಜೆ.ಬಿ.ಸಿ.ಎಂ.ಎಸ್.‌

ಕನ್ನಡ ಸಂಶೋಧನಾ ಕೇಂದ್ರ

ಬಿ.ಜಿ.ಎಸ್.‌ ಆರೋಗ್ಯ ಮತ್ತು ಶಿಕ್ಷಣ ನಗರ, ಕೆಂಗೇರಿ, ಬೆಂಗಳೂರು-60


ಸಾರಲೇಖ

ಉಪ್ಪಾರಹಳ್ಳಿಯ ಭಾಗವಂತಿಕೆ ಸಾಂಪ್ರದಾಯ ಕುರಿತ ಲೇಖನವು ಕನ್ನಡ ಸಂಸ್ಕೃತಿಯ ವಿಶಿಷ್ಟ ಅಂಶವನ್ನು ಅನಾವರಣಗೊಳಿಸುತ್ತದೆ. ಇದರಲ್ಲಿ ಭಾಗವಂತಿಕೆ ಸಂಪ್ರದಾಯ, ಅದರ ಧಾರ್ಮಿಕ ಹಾಗೂ ಜಾನಪದ ಮಹತ್ವ, ಗ್ರಾಮ್ಯ ಜೀವನದೊಂದಿಗೆ ಇರುವ ಸಂಬಂಧ ಮತ್ತು ಆಚಾರ-ವಿಚಾರಗಳ ಪೂರಕವಾದ ಐತಿಹಾಸಿಕ ವಿವರಣೆಗಳನ್ನು ಒಳಗೊಂಡಿದೆ. ಉಪ್ಪಾರಹಳ್ಳಿಯ ತಲೆಮಾರುಗಳಿಂದ ಮುಂದುವರಿಯುತ್ತಿರುವ ಪ್ರಾಮಾಣಿಕ ಪೂಜಾ ವಿಧಾನಗಳು, ಅಲ್ಲಿ ವಾಸ್ತವಿಕವಾಗಿ ಧರ್ಮದ ಜೀವಂತತೆ ಬಿಂಬಿಸುತ್ತವೆ. ಈ ಸಂಪ್ರದಾಯವು ಧಾರ್ಮಿಕ ಆಚರಣೆಗಳನ್ನು ಜಾನಪದ ಕಲೆ ಮತ್ತು ಸಾಹಿತ್ಯದೊಂದಿಗೆ ಮೇಳೈಸಿ, ಕೇವಲ ಶಾಸ್ತ್ರೀಯ ಸೌಂದರ್ಯದ ದಾರಿಯಲ್ಲೇ ಅಲ್ಲ, ಗ್ರಾಮೀಣ ಜೀವನದ ಒಡನಾಟಕ್ಕೂ ಚೈತನ್ಯ ನೀಡುತ್ತಿದೆ. ಕಾರ್ತಿಕ ಮಾಸದಲ್ಲಿ ನಡೆಯುವ ದೀಪೋತ್ಸವ, ದಾಸಯ್ಯನ ಸಲಾಂ, ಕೋಡಂಗಿ ಕುಣಿತ, ಪಟದ ಆರಾಧನೆ ಈ ಆಚರಣೆಗಳಲ್ಲಿ ಸಂಪ್ರದಾಯದ ತಾತ್ವಿಕ ಮೌಲ್ಯಗಳನ್ನು ಉಳಿಸಲು ಗ್ರಾಮಗಳು ತೊಡಗಿವೆ.


ಜಾನಪದ ಸಾಹಿತ್ಯದ ಪ್ರಭಾವವು ಶಿಸ್ಟರೂಪದ ಸಾಹಿತ್ಯವನ್ನು ಪ್ರೇರಿಸಲು ಕಾರಣವಾಗಬಹುದು ಎಂಬ ತತ್ತ್ವವು ಗಮನಾರ್ಹವಾಗಿದೆ. ಪುರಂದರದಾಸ, ಕನಕದಾಸರಂತಹ ಕವಿಗಳಲ್ಲಿ ಜಾನಪದ ಶಬ್ದಗಳ ಪ್ರಭಾವವಿರುವ ಸಾಧ್ಯತೆ ಇದೆ. ಉಪ್ಪಾರಹಳ್ಳಿಯು ಯುವಕರನ್ನೂ ಈ ಸಂಪ್ರದಾಯಗಳಲ್ಲಿ ಒಳಗೊಂಡು, ಸಂಪ್ರದಾಯದ ಮುಂದುವರಿಕೆಗಾಗಿ ಉತ್ತೇಜನ ನೀಡುತ್ತಿದೆ. ವಿಶಿಷ್ಟ ಪೂಜಾ ವಿಧಾನಗಳು, ಹನುಮಂತರಾಯ ದೇವಾಲಯ, ಮತ್ತು ಸಾಮೂಹಿಕ ಭಜನೆಗಳು ಗ್ರಾಮಕ್ಕೆ ಒಂದು ತಾತ್ವಿಕ ವಾತಾವರಣವನ್ನು ಸೃಷ್ಟಿಸುತ್ತವೆ. ಭಾಗವಂತಿಕೆಯಂತಹ ಸಂಪ್ರದಾಯಗಳು ಕರ್ನಾಟಕದ ಗ್ರಾಮೀಣ ಧಾರ್ಮಿಕ ಆಚರಣೆಗಳಲ್ಲಿ ಜನಪದ ಕಲೆಯ ಶ್ರೇಷ್ಠತೆಯನ್ನು ತೋರಿಸುತ್ತವೆ. ಇಂತಹ ಸಂಪ್ರದಾಯಗಳು ನಶಿಸುವ ಮುನ್ನ ಅವುಗಳ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ತುರ್ತಾಗಿ ಯೋಚಿಸಬೇಕು. ಜಾನಪದ ಮತ್ತು ಶಿಸ್ಟರೂಪದ ಸಾಹಿತ್ಯದ ಅಂಶಗಳನ್ನು ಸಂಗ್ರಹಿಸಿ, ಯುವ ಜನಾಂಗದ ಮನಸ್ಸಿನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ಹಾದಿಯಲ್ಲಿ ಮುಂದುವರಿಯುವುದು ಅನಿವಾರ್ಯ.


ಭಾಗವಂತಿಕೆ ಸಂಪ್ರದಾಯಕ್ಕೆ ಉಪ್ಪಾರಹಳ್ಳಿಯ ಕೊಡುಗೆ

ನಾಗಮಂಗಲ ಪಟ್ಟಣದಲ್ಲಿ ಇರುವ ಸೌಮ್ಯಕೇಶವ ದೇವಾಲಯವು ಇತಿಹಾಸಪೂರ್ಣವಾದ ಮಹತ್ವವನ್ನು ಹೊಂದಿದ್ದು, ಸುಮಾರು ಸಾವಿರ ವರ್ಷಗಳ ಹಿಂದಿನ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಪ್ರತೀಕವಾಗಿದೆ. ಪುರಾತನ ಕಾಲದಿಂದಲೇ, ದೇವಾಲಯಗಳ ನಿರ್ಮಾಣಕ್ಕಿಂತ ಮೊದಲು ಸ್ಥಳಕ್ಕೆ ಧಾರ್ಮಿಕ ಶುದ್ಧತೆಯನ್ನು ತರುವ ಉದ್ದೇಶದಿಂದ ಪ್ರಾಣಪ್ರತಿಷ್ಠೆ ಮಾಡುವ ಪದ್ಧತಿ ವಾಡಿಕೆಯಲ್ಲಿತ್ತು. ಇದು ಪ್ರಾಚೀನ ಭಾರತದ ಆಧ್ಯಾತ್ಮಿಕ ಪರಂಪರೆಯ ಉದಾಹರಣೆಯಾಗಿದೆ. ಸೌಮ್ಯಕೇಶವ ದೇವಾಲಯವನ್ನು ನಿರ್ಮಿಸುವ ಮೊದಲು ನಾಗಮಂಗಲದ ಈಶಾನ್ಯ ದಿಕ್ಕಿನ ಉಪ್ಪಾರಹಳ್ಳಿಯಲ್ಲಿ ಹನುಮಂತರಾಯಸ್ವಾಮಿ ದೇವಾಲಯವನ್ನು ಪ್ರಯೋಗಾತ್ಮಕವಾಗಿ ನಿರ್ಮಿಸಿದ್ದರ ವಿವರಗಳು ಇಲ್ಲಿ ಗಮನಾರ್ಹವಾಗಿವೆ. ಹನುಮಂತರಾಯಸ್ವಾಮಿ ದೇವಾಲಯದ ಪ್ರಾಥಮಿಕ ರೂಪವು ಸೌಮ್ಯಕೇಶವ ದೇವಾಲಯಕ್ಕೆ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸಿದರೂ, ಈ ಎರಡೂ ದೇವಾಲಯಗಳ ಉಲ್ಲೇಖವು ದೈವೀ ಭಕ್ತಿಯ ಶ್ರದ್ಧೆಯೇ ಮುಖ್ಯ ಎಂಬುದನ್ನು ತಿಳಿಸುತ್ತದೆ.


ಈ ಪ್ರದೇಶದ ಪುರಾತನ ಜಲಸಂಪತ್ತು ಮತ್ತು ಅದರ ಮಹತ್ವವು ಇಲ್ಲಿನ ಐತಿಹಾಸಿಕ ತಾತ್ವಿಕತೆಯನ್ನು ಹೆಚ್ಚಿಸುತ್ತದೆ. ಉಪ್ಪಾರಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ ಇರುವ ಕೊಳದಿಂದಲೇ ಸೌಮ್ಯಕೇಶವ ದೇವಾಲಯಕ್ಕೆ ನೀರು ತರಲಾಗುತ್ತಿತ್ತು ಎಂಬುದು ಅಲ್ಲಿನ ಜೀವನ ಮತ್ತು ಆಚಾರವಿಧಿಗಳ ಸಮಗ್ರತೆಯನ್ನು ತೋರುತ್ತದೆ. ಇಂದು ʻತೊಟ್ಲು ಗುಂಡಿʼ ಎಂಬ ಹೆಸರಿನಲ್ಲಿ ಗುರುತಾದ ಈ ಪ್ರದೇಶ, ಅಂದಿನ ಜಲಸಂಪತ್ತಿನ ನಿರ್ವಹಣೆಯ ಸೂಕ್ಷ್ಮತೆಯನ್ನು ಚಿತ್ರಿಸುತ್ತದೆ. ಈ ಎಲ್ಲಾ ವಿವರಗಳು, ದೇವಾಲಯ ಮತ್ತು ಜಲಸಂಪತ್ತಿನ ಮಧ್ಯೆ ಗಾಢವಾದ ಸಂಬಂಧವನ್ನು ಬಿಂಬಿಸುವಂತಿವೆ. ಈಶಾನ್ಯ ದಿಕ್ಕಿನ ದೇವಸ್ಥಾನ, ಕೊಳ, ಇವುಗಳೆಲ್ಲವೂ ಪುರಾತನ ಕಾಲದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜೀವನದ ಉಳಿವಿಗಾಗಿ ಅವಿಭಾಜ್ಯ ಭಾಗವಾಗಿವೆ. ಪ್ರತಿ ಅಂಶವೂ ನಾಗಮಂಗಲದ ಪುರಾತನ ಸಾಂಸ್ಕೃತಿಕ ಭವಿತವ್ಯದ ಒಂದು ಭಾಗವಾಗಿ ಉಳಿದಿದ್ದು, ಇತಿಹಾಸವನ್ನು ಜೀವಂತವಾಗಿಟ್ಟಿದೆ.


ಭಾಗವಂತಿಕೆ ಸಂಪ್ರದಾಯ ಮತ್ತು ಸಾಹಿತ್ಯವು ಧಾರ್ಮಿಕ ಭಾವನೆಗೆ ಅತ್ಯಂತ ಹತ್ತಿರವಾಗಿದ್ದು, ದೇವರೊಂದಿಗೆ ಆಧ್ಯಾತ್ಮಿಕ ಸಂಪರ್ಕವನ್ನು ಮೂಡಿಸುವ ಶಕ್ತಿಯುಳ್ಳದ್ದು. ಇದರಲ್ಲಿ ಶಿಷ್ಟ ಮತ್ತು ಜಾನಪದ ಅಂಶಗಳಿರುವುದರಿಂದ, ಸಾಮಾನ್ಯ ಜನರಿಗೂ ಧರ್ಮದ ಮೌಲ್ಯಗಳನ್ನು ತಲುಪಿಸುತ್ತದೆ. ಈ ಸಂಪ್ರದಾಯವು ಪುರಾಣ ಕಾಲಘಟ್ಟದಲ್ಲಿ ಹುಟ್ಟಿರುವ ಸಾಧ್ಯತೆಯನ್ನು ಭಕ್ತರು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಒಳಗೊಂಡಿರುವ ಸಾಹಿತ್ಯ ಮತ್ತು ಪರಂಪರೆಯು ನಿನ್ನೆ-ಮೊನ್ನೆಯದು ಅಲ್ಲ, ಇದು ದೀರ್ಘಕಾಲದಿಂದಲೇ ಪ್ರಚಲಿತವಾಗಿದೆ. ಭಾಗವಂತಿಕೆ ಸಾಹಿತ್ಯವು ವಿಷ್ಣುಪುರಾಣ, ಶಿವಪುರಾಣ, ಮತ್ತು ಬ್ರಹ್ಮಪುರಾಣಗಳನ್ನು ಒಳಗೊಂಡಿದೆ. ಇದು ಮುಖ್ಯವಾಗಿ ವಿಷ್ಣುವಿನ ಸಂಬಂಧಿ ದೇವಾಲಯಗಳಿಗೆ ಸಂಬಂಧಿಸಿದಂತೆ ಕಾಣಿಸಬಹುದು, ಆದರೆ ಅದಕ್ಕೆ ಮಾತ್ರ ಸೀಮಿತವಲ್ಲ. ಇದರಲ್ಲಿ ಶಿವ, ಬ್ರಹ್ಮ, ಆದಿಶಕ್ತಿ ಪಾರ್ವತಿ ಮತ್ತು ಗಣಪತಿ ಸೇರಿದಂತೆ ಅನೇಕ ದೇವತೆಗಳ ಕುರಿತ ಕಥೆಗಳನ್ನು ಒಳಗೊಂಡಿದೆ. ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಹೆಚ್ಚು ಶಿವ ದೇವಾಲಯಗಳು ಪೂಜಿಸಲ್ಪಡುತ್ತವೆ. ಶಿವ ದೇವಾಲಯಗಳಿಗೆ ಈ ಮಾಸದಲ್ಲಿ ಹೆಚ್ಚು ಮಹತ್ವವಿದೆ ಆದರೆ ಇದೇ ಮಾಸದಲ್ಲಿ ವಿಷ್ಣು ದೇವಾಲಯಗಳಿಗೆ ಏಕೆ ಭಾಗವಂತಿಕೆ ಸಂಪ್ರದಾಯದವರು ನಡೆದುಕೊಳ್ಳುತ್ತಾರೆ? ಇಲ್ಲಿ ವಿಭೂತಿ ಧಾರಿಯಾದಂತಹ ಶಿವ, ನಾಮಧಾರಿ ಆದಂತಹ ವಿಷ್ಣು, ವಿಭೂತಿ ಒಡೆಯನ ಪೂಜೆ ಕಾರ್ತಿಕ ಮಾಸದಲ್ಲೇ ಹೆಚ್ಚು ಪ್ರಚಲಿತ. ಶಿವರಾತ್ರಿ ಬಿಟ್ಟರೆ ಕಾರ್ತಿಕ ಮಾಸ ಹೆಚ್ಚು ಶಿವ ಪೂಜೆಗೊಳ್ಳುವ ಮಾಸ. ಆದರೂ ಕಾರ್ತಿಕ ಮಾಸದಲ್ಲಿ ವಿಷ್ಣು ದೇವಾಲಯಗಳಿಗೆ ಏಕೆ ಭಾಗವಂತಿಕೆ ಸಂಪ್ರದಾಯ ಆಚರಿಸಿಕೊಂಡು ಹೋಗುತ್ತಾರೆ? ಎಂಬುದು ಜನಗಳಿಗೆ ತಿಳಿಯಬೇಕಿರುವ ವಿಚಾರವಾಗಿದೆ.


ಕಾರ್ತಿಕ ಮಾಸದ ಅಮಾವಾಸ್ಯೆಯ ನಂತರದ ಹುಣ್ಣಿಮೆಯ ದಿನದಂದು ವಿಷ್ಣು ದೀಪೋತ್ಸವ ಬರುತ್ತದೆ. ಇದು ಧಾರ್ಮಿಕ ಆಚರಣೆಗಳಲ್ಲಿ ವಿಶಿಷ್ಟವಾದ ಸ್ಥಾನ ಪಡೆದಿರುವಂಥದ್ದು. ಆ ವಿಷ್ಣು ದೀಪೋತ್ಸವದ ದಿನ ಅನೇಕ ವಿಷ್ಣು ದೇವಾಲಯಗಳಲ್ಲಿ ಲಕ್ಷದ್ವೀಪವೆಂಬ ಹೆಸರಿನಲ್ಲಿ ದೀಪಗಳ ಆರಾಧನೆ ನಡೆಯುತ್ತದೆ. ಆ ದೀಪಗಳ ಆರಾಧನೆ ನಡೆಯಲು ಅಂದು ʻಭಾಗವಂತಿಕೆʼ ʻವಂತಿಕೆʼ ಅಂದರೆ ಭಗವಂತನಿಗೆ ವಂತಿಕೆ ರೂಪದಲ್ಲಿ ಕೊಡುವಂತಹ ದೇಣಿಯನ್ನು ಆಹಾರರೂಪದಲ್ಲಾಗಬಹುದು, ಧನರೂಪದಲ್ಲಾಗಬಹುದು, ಮತ್ತೊಂದು ಮಗದೊಂದು ಯಾವುದೇ ರೂಪದಲ್ಲಾದರೂ ಸಂಗ್ರಹ ಮಾಡುವುದರ ಮೂಲಕ   ಸುತ್ತಮುತ್ತಲ ಗ್ರಾಮಗಳನ್ನು ಒಗ್ಗೂಡಿಸಿಕೊಂಡು ಲೋಕಕಲ್ಯಾಣಾರ್ಥವಾಗಿ ನಡೆಸುವ ಆಚರಣೆಯೇ ವಿಷ್ಣು ದೀಪೋತ್ಸವ.


ಭಾಗವಂತಿಕೆ ಸಂಪ್ರದಾಯ ಹಿಂದಿನ ಕಾಲದಲ್ಲಿ ಭಯ-ಭಕ್ತಿ ಮತ್ತು ಏಕಾಗ್ರತೆಯ ಸಂಕೇತವಾಗಿ ಆಚರಿಸಲಾಗುತ್ತಿತ್ತು. ಆಧುನಿಕತೆ ಮತ್ತು ವೈಜ್ಞಾನಿಕ ಪ್ರಗತಿ ಹಿನ್ನೆಲೆಗಳಲ್ಲಿ ಧಾರ್ಮಿಕ ಆಚರಣೆಗಳು ಸ್ವಪ್ರತಿಷ್ಠೆಗೆ ಒಳಗಾಗುತ್ತಿವೆ, ದೇವರ ಮೇಲಿನ ಗೌರವ ಮತ್ತು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದನ್ನು ಶ್ರೀ ವೆಂಕಟೇಶ್ ಉಪ್ಪಾರಹಳ್ಳಿ ಅವರು ಪ್ರಸ್ತಾಪಿಸುತ್ತಾರೆ. ಹಳೆಯ ಕಾಲದಲ್ಲಿ ಸರಳವಾಗಿ ಆದರೆ ಗೌರವದಿಂದ ಪೂಜಾ ವಿಧಾನಗಳು ನಡೆಯುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಭಾಗವಂತಿಕೆಯಂತಹ ಸಂಪ್ರದಾಯಗಳು ಕೆಲವೇ ಗ್ರಾಮಗಳಲ್ಲಿ ಮಾತ್ರ ಮುಂದುವರಿದಿವೆ. ತಮ್ಮ ಗ್ರಾಮ ಭಾಗವಂತಿಕೆ ಸಂಪ್ರದಾಯವನ್ನು ಉಳಿಸಿಕೊಂಡಿರುವುದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸುತ್ತಾರೆ.


ಉಪ್ಪಾರಹಳ್ಳಿ ಗ್ರಾಮ ಕಸಬಾ ಹೋಬಳಿ ನಾಗಮಂಗಲ ತಾಲೂಕಿನ ಕೇಂದ್ರ ಸ್ಥಾನದಿಂದ ಕೇವಲ ಕೂಗಳತೆಯಲ್ಲಿರುವ ಗ್ರಾಮ. 36 ದೇವಾಲಯಗಳಿರುವುದು ಈ ಗ್ರಾಮದ ವಿಶೇಷ. ಈ ದೇವಾಲಯಗಳು ತಿಳಿಸುವುದೇನೆಂದರೆ ಈ ಗ್ರಾಮದ ಹಿನ್ನೆಲೆ, ಈ ಗ್ರಾಮ ನೆನ್ನೆ ಮೊನ್ನೆ ಕಟ್ಟಿರುವುದಲ್ಲ ಎಂಬುದು. ವಾರ್ಷಿಕವಾಗಿ ಕನಿಷ್ಠವೆಂದರೂ 18 ವಾರ್ಷಿಕ ಕೈಂಕರ್ಯಗಳು ಈ ಗ್ರಾಮದ ಶ್ರೀ ಹನುಮಂತರಾಯ ದೇವಸ್ಥಾನದಲ್ಲಿ ನಡೆಯುತ್ತವೆ.  ಸಂಕ್ರಾಂತಿ ಆರಂಭದಿಂದ ಶೂನ್ಯ ಮಾಸದ ವರಗೆ ಅಂದರೆ   ಡಿಸೆಂಬರ್ 16 ರಿಂದ ಜನವರಿ 15ರವರೆಗೆ ಪ್ರತಿದಿನ ಮುಂಜಾನೆಯಿಂದ ರಾತ್ರಿ ಎಲ್ಲಾ ಪೂಜೆ ನೆರವೇರುತ್ತದೆ. "ಹೆಮ್ಮೆಯ ವಿಷಯವೆಂದರೆ ಕೆಲವು ಊರುಗಳಲ್ಲಿ ಯುವಕರೆಲ್ಲ ಭಾಗವಂತಿಕೆ ಬಗ್ಗೆ ಆಸಕ್ತಿ ತೋರುತ್ತಿಲ್ಲ ಅಂತಾರೆ; ಆದರೆ ನನ್ನೂರಿನ ಗ್ರಾಮದಲ್ಲಿ ದೊಡ್ಡವರೊಂದಿಗೆ ಬೆಳಗಿನ ಜಾವ ಮೂರು ನಾಲ್ಕು ಗಂಟೆಯಿಂದಲೇ ಹಿರಿಯರೊಂದಿಗೆ ಯುವಕರು ಸೇರಿಕೊಂಡು ಭಜನೆ ಮಾಡುತ್ತಾರೆ. ಶಿವರಾತ್ರಿ ದಿನವೂ ಭಜನೆ ನಡೆಯುತ್ತದೆ. ಇಲ್ಲಿ ವಿಷ್ಣು ಅಥವಾ ವಿಷ್ಣು ಸಂಬಂಧಿ ದೇವರುಗಳನ್ನಲ್ಲದೆ ಎಲ್ಲಾ ದೇವರುಗಳನ್ನು ಪೂಜಿಸುತ್ತಾರೆ. ಭಾಗವಂತಿಕೆ ಪದಗಳನ್ನೇ ಆಧರಿಸಿಕೊಂಡು ಭಜನೆ ಮಾಡುತ್ತಾರೆ. ಇಲ್ಲಿ ಭಾಗವಂತಿಕೆ ಪದಗಳನ್ನು ದಾಟಿಯಲ್ಲಿ ಮಾರ್ಪಡಿಸಿಕೊಂಡು ಭಜನೆ ಮಾಡುತ್ತಾರೆ. ಹಿಮ್ಮೇಳ ಮುಮ್ಮೆಳದವರಿರುತ್ತಾರೆ” ಎಂದು ತಮ್ಮೂರು ಉಪ್ಪಾರಹಳ್ಳಿಯ ಭಾಗವಂತಿಕೆ ಸಂಪ್ರದಾಯದ ಬಗ್ಗೆ ವಂಕಟೇಶ್‌ ಹೇಳುತ್ತಾರೆ.


ಇತ್ತೀಚಿನ ದಿನಗಳಲ್ಲಿ ಇದು ಸರಳವಾಗುತ್ತಿದೆ. ಹಿಂದೆ ಬಹಳ ವಿಜೃಂಭಣೆಯಿಂದ ಭಜನೆ ಸಾಗುತ್ತಿತ್ತು. ಹಿಂದೆ ಪ್ರತಿ ಶನಿವಾರ ರಾಮಮಂದಿರದಲ್ಲಿ ಭಜನೆ ನಡೆಯುತ್ತಿತ್ತು. ಇಡೀ ಕರ್ನಾಟಕದಲ್ಲಿ ಎಲ್ಲಿಯೂ ಕೂಡ ನೋಡಲು ಸಿಗದಿರುವಂತ ರಾಮ ವಿಗ್ರಹ, ರಾಮ, ಲಕ್ಷ್ಮಣ, ಸೀತಾ, ಹನುಮಂತ ಸಮೇತವಾದ ಅಮೃತಶಿಲೆಯ ವಿಗ್ರಹ ಉಪ್ಪಾರಹಳ್ಳಿ ಗ್ರಾಮದಲ್ಲಿದೆ. ಇವತ್ತು ಕೂಡ ಪ್ರತಿ ಮನೆಯವರು ಸರದಿ ಪ್ರಕಾರ ವಾರಕ್ಕೆ ಒಂದು ಮನೆಯಂತೆ ಪೂಜೆ ಕೈಂಕರ್ಯ ನಡೆಯುತ್ತದೆ. ಆದರೆ ಹಿಂದಿನಂತೆ ಭಜನೆ ಇಲ್ಲ; ಈಗ ನಿಂತೋಗಿದೆ. ಎನ್ನುತ್ತಾರೆ,ವಕ್ತೃಗಳು. ಅಲ್ಲದೆ ಉಪ್ಪಾರಹಳ್ಳಿಯ ಗ್ರಾಮದ ಹೆಣ್ಣುಮಗಳು ಅಂದು ಚಪ್ಪರದ ದಿನ ಕುಲದ ವೀಳ್ಯ ಕೊಡಬೇಕಾದ ಪದ್ಧತಿ ಇತ್ತು. ವೀಳ್ಯ ಸ್ವೀಕರಿಸುವ ಸಂದರ್ಭದಲ್ಲೂ ಮತ್ತು ಕೊಡುವ ಸಂದರ್ಭದಲ್ಲೂ ಸಾಮೂಹಿಕವಾಗಿ ಭಾಗವಂತಿಕೆ ಪದಗಳನ್ನು ಕೂತು ಹಾಡಿ ವೀಳ್ಯವನ್ನು ಸಮರ್ಪಿಸಿ ಊರಿನ ಹೆಣ್ಣುಮಗಳನ್ನು ಧಾರೆ ಎರೆಯುವ ಪದ್ಧತಿ ಸಂಪ್ರದಾಯ ಇದ್ದು, ಆ ಸಂದರ್ಭದಲ್ಲಿ ಹಾಡುತ್ತಿದ್ದ ಸಾಹಿತ್ಯ ಹಾಗೂ ಹಾಡುಗಾರಿಕೆಗೆ ಜನರು ಭಾವಪರವಶರಾಗುತ್ತಿದ್ದರಂತೆ. ಇಂತಹ ಸಾಹಿತ್ಯವನ್ನು ನಾವು ಇನ್ನಷ್ಟು ಸಂಶೋಧನೆಯನ್ನು ಕೈಗೊಳ್ಳುವುದರ ಮೂಲಕ ಉಳಿಸಿಕೊಳ್ಳಬೇಕಾದ ಅನಿವಾರ್ಯವಿದೆ.


ಹಳ್ಳಿಗಳಲ್ಲಿ ಜಾನಪದದ ಸೊಗಡಲ್ಲಿ ಗ್ರಾಮ ದೇವತೆಯ ಹಾಡುಗಳನ್ನು ಕುರಿತು ವಿದ್ಯಾವಂತರು ಅವಿದ್ಯಾವಂತರ ನಡುವೆ ಹಾಡುವಾಗ ದೋಷಗಳು ಕಂಡು ಬಂದರೂ ಈ ಹಿನ್ನೆಲೆಯಲ್ಲಿ ನೋಡಿದರೆ ಭಗವಂತಿಕೆ ರಾಮಾಯಣದ ಸಾಹಿತ್ಯ ಇದು ಪರಿಷ್ಕೃತ ಸಾಹಿತ್ಯ ಎನ್ನಬಹುದು.


  ನಾಗಮಂಗಲ ತಾಲ್ಲೂಕಿನ ಉಪ್ಪಾರಹಳ್ಳಿಯಲ್ಲಿ  ಗೋಡೆ ಕಟ್ಟುವ ಉಪ್ಪಾರರು ಇರುವುದರಿಂದ ಉಪ್ಪಾರಳ್ಳಿ ಎಂದು ಹೆಸರಾಗಿದೆ. ಉಪ್ಪಾರ ಜನಾಂಗ ಕಟ್ಟುವ ಸಮುದಾಯ. ಈ ಜನಾಂಗ ಹೆಚ್ಚಾಗಿ ಇರುವುದರಿಂದಲೋ ಏನೋ ಉಪ್ಪಾರಳ್ಳಿ ಎಂದು ಹೆಸರು ಬಂತು ಎನ್ನುತ್ತಾರೆ. ಇಡೀ ರಾಜ್ಯದಾದ್ಯಂತ ಉಪ್ಪಾರ ಜನಾಂಗ ಕಟ್ಟಿರುವ ಕಟ್ಟಡಗಳು ಜೀವಂತ ಸಾಕ್ಷಿಯಾಗಿವೆ.. ದೇವಾಲಯಗಳನ್ನು ಕಟ್ಟಿರುವುದರಿಂದ ಹಿಡಿದು ಸಾಮಾನ್ಯ ಬಡಜನರ ಗುಡಿಸಲು ಮನೆ ಕಟ್ಟುವವರೆಗೂ ಉಪ್ಪಾರ ಸಮುದಾಯ ಕೆಲಸ ಮಾಡಿದೆ. "ನಮ್ಮ ಹಿಂದಿನ ತಲೆಮಾರಿನವರು ಹೇಳುತ್ತಿದ್ದರು. ತರಗು ಗುಡಿಸಿ ಮನೆ ಮಾಡಿದವರು ನಾವು ಎಂದು " ಎನ್ನುತ್ತಾರೆ ವೆಂಕಟೇಶ್ ಉಪ್ಪಾರಹಳ್ಳಿ  


ನಾಗಮಂಗಲ ತಾಲೂಕಿನ ಉಪ್ಪಾರಹಳ್ಳಿ 350 ಮನೆಗಳಿರುವ ಗ್ರಾಮ. ಕಾರ್ತಿಕ ಮಾಸದ ಎರಡನೇ ಸೋಮವಾರ ಇಲ್ಲಿಂದ ಭಾಗವತಿಕೆ ಕಟ್ಟಿಕೊಂಡು ಊರಾಡಲು ಹೊರಡುವುದು ವಾಡಿಕೆ. ಕಾರಣವೆಂದರೆ, ಕೊನೆ ಸೋಮವಾರ ಅಮಾವಾಸ್ಯೆ ಬರುತ್ತದೆ. ಅಮಾವಾಸ್ಯೆಯಾದ 15 ದಿವಸಕ್ಕೆ ವಿಷ್ಣು ದೀಪೋತ್ಸವ ಬರುವುದು. ಉಪ್ಪಾರಹಳ್ಳಿಯಲ್ಲಿ ಭಾಗವಂತಿಕೆ ಕಟ್ಟಿ ಊರಾಡಲು ಹೋಗಿ ಬಂದ ನಂತರ ಅಂದಿನಿಂದ ವಿಷ್ಣು ದೀಪೋತ್ಸವದ ತನಕ ಸಂಜೆ ಹೊತ್ತು ಪ್ರತಿದಿನ ವಿಷ್ಣುವಿಗೆ ನೈವೇದ್ಯ ಮಾಡುತ್ತಾರೆ. ಇದು ಉಪ್ಪಾರಹಳ್ಳಿ ಗ್ರಾಮದ ಭಾಗವಂತಿಕೆಯ ವಿಶೇಷ. "ನಾವು ಅಟ್ನೆ ಚರ್ಪು ಅಂತೀವಿ; ನಲ್ಕುಂದಿ ಕಡೆ ಇದನ್ನು ಚರ್ಪು ಚೆಲ್ಲಾಟ ಎನ್ನುತ್ತಾರೆ.  ಅಟ್ಟಣಿಗೆಯಲ್ಲಿ ಇಟ್ಟು ನೈವೇದ್ಯ ಮಾಡುವುದರಿಂದ ಅಟ್ನಿ ಚರ್ಪು ಅಂತಾರೆ"


ಉಪ್ಪಾರಹಳ್ಳಿಯಲ್ಲಿ ಎರಡನೇ ಸೋಮವಾರವೇ ಊರಾಡಲು ಹೋಗಲು ಕಾರಣವೆಂದರೆ, ಈ ಊರಿನಲ್ಲಿ ಬಹುತೇಕರು ಉಪ್ಪಾರ  ವೃತ್ತಿ ಮಾಡುತ್ತಿದ್ದುದರಿಂದ ಮೊದಲನೇ ವಾರ ಭಾಗವಂತಿಕೆಗೆ ಹೋಗುವ ಹಿನ್ನೆಲೆಯಲ್ಲಿ ಸಾರಣೆ ನಡೆಯುತ್ತಿತ್ತು. ಅಂದರೆ (ಮುಂದಿನ ವಾರ ಊರಾಡಲು ಹೊರಡಬೇಕು ಈ ವಾರ ಬಟ್ಟೆ ಬರೆಯಲ್ಲ ಸ್ವಚ್ಛ ಮಾಡಿಕೊಳ್ಳಿ) ಎಂದು ಡಂಗೂರ ಮಾಡುವುದೇ ಸಾರಣೆ. ಅಂದರೆ ಬಟ್ಟೆ ಬರೆಗಳಲ್ಲದೆ ಊರಾಡಲು ಹೋಗಬೇಕಾಗಿರುವ ಸಿದ್ಧತೆಗಳು, ಪಟದ ಕುಣಿತವು ಇದ್ದುದರಿಂದ ಪಟ ಪರಿಕರಗಳೆಲ್ಲ ಸಿದ್ಧಗೊಳಿಸಿಕೊಳ್ಳುವುದು, ಪಟಕ್ಕೆ ಕಟ್ಟುವ ಶಂಕು, ಚಕ್ರ, ಪಟದ ವಸ್ತ್ರಗಳು ಎಲ್ಲಾ ದೇವರ ಸಾಮಗ್ರಿಗಳಿಗೂ ಮುಂದೆ ಊರಾಡಲು ಹೋದಾಗ ಯಾವುದೇ ವಿಘ್ನಗಳಾಗದಂತೆ ಪೂಜೆ ಸಲ್ಲಿಸುತ್ತಿದ್ದರು. ನಂತರ ಸೋಮವಾರ ಬೆಳಿಗ್ಗೆ ಸರಿ ಸುಮಾರು 8:30ರೊಳಗೆ ಎಲ್ಲರೂ ಹನುಮಂತ ದೇವಸ್ಥಾನದ ಹತ್ತಿರ ಸೇರಿ ಪಟಗಳನ್ನು ಸಿದ್ಧಗೊಳಿಸುವ ಪ್ರಕ್ರಿಯೆ ನಡೆಯುವುದು. ಒಂದು ಪಟವನ್ನು ಹಿಟ್ಟಿನ ಪಟ ಎಂದು ಸಿದ್ಧಮಾಡಿ ಕಳಿಸುತ್ತಾರೆ. ಈ ಊರಿನ ಕಂದಾಯ ದಾಖಲೆ ಗ್ರಾಮ ಅರಸೇಗೌಡನ ಕೊಪ್ಪಲು. ಈ ಅರಸೇಗೌಡನ ಕೊಪ್ಪಲಿಗೆ ಹಿಟ್ಟಿನ ಪಟವನ್ನು ಕಳಿಸುತ್ತಾರೆ. ಅಲ್ಲಿ ದೇವರೊಂದಿಗೆ ಹೋದವರಿಗೆಲ್ಲ ಮನೆಗೆ ಇಬ್ಬರಂತೆ ಊಟ ಕೊಡುತ್ತಾರೆ. ಇಲ್ಲಿಂದ ಹಿಟ್ಟಿನ ಪಟ ತೆಗೆದುಕೊಂಡು ಹೋದವರು ಅರಸೇಗೌಡನ ಕೊಪ್ಪಲ ಮಾರಮ್ಮನ ದೇವಸ್ಥಾನದ ಮುಂದೆ ಕಂಬ ನಿಲ್ಲಿಸಿ, ಈ ದಿನ ಮಧ್ಯಾಹ್ನ ನಮ್ಮೂರಿನ ಭಾಗವಂತಿಕೆ ಮೇಳ ಬರುವುದೆಂದು ತಿಳಿಸುತ್ತಾರೆ. ಹೀಗೆ ಉಪ್ಪಾರ ಹಳ್ಳಿಯಿಂದ ಪ್ರಾರಂಭವಾದ ಭಾಗವಂತಿಕೆ ಜಾತ ಮೊದಲು ಮದಲಹಳ್ಳಿ, ಅಲ್ಲಿಂದ ಚೌಡೇನಹಳ್ಳಿ, ನಂತರ ತೊಳಲಿ, ಅಲ್ಲಿಂದ ಅರಸೇಗೌಡನ ಕೊಪ್ಪಲು, ಅರಸೇಗೌಡನ ಕೊಪ್ಪಲಿಂದ ಬಸವೇಶ್ವರನಗರ, ಅಲ್ಲಿಂದ ಟಿಬಿ ಬಡಾವಣೆ, ಟಿವಿ ಬಡಾವಣೆಯಿಂದ ನಾಗಮಂಗಲ, ನಾಗಮಂಗಲದಿಂದ ಯಥಾಸ್ಥಿತಿ ಯಾವ ಸ್ಥಳದಿಂದ ಹೊರಟರೋ ಆ ಸ್ಥಳಕ್ಕೆ ಹೋಗಿ ಸೇರಿಕೊಳ್ಳುತ್ತಾರೆ.


ಇಷ್ಟೊಂದು ಊರುಗಳನ್ನು ಸುತ್ತಲು ಸಾಧ್ಯನಾ ಎನ್ನುವುದು ಯಕ್ಷಪ್ರಶ್ನೆ. ಹೋದ ಊರುಗಳಲ್ಲೆಲ್ಲ ಪ್ರತಿ ಮನೆಯಲ್ಲಿ ಪೂಜೆ ಮಾಡಲಿಕ್ಕೆ ಸಾಧ್ಯವೇ?

ಗ್ರಾಮಗಳಲ್ಲಿ ಯಾವ ದೇವಸ್ಥಾನಕ್ಕೆ ಹೋದರು ಆ ಗ್ರಾಮ ದೇವಾಲಯಗಳಲ್ಲಿ ಮೇಳಕಟ್ಟುವುದು, ಪಟದ ಕುಣಿತ, ಕೋಡಂಗಿ ಕುಣಿತ ಇರುತ್ತದೆ. ಇದರ ಜೊತೆಗೆ ಶಂಕು, ಚಕ್ರ, ಪಟ ಇವೆಲ್ಲಕ್ಕೂ ಪ್ರತಿ ಗ್ರಾಮಗಳಲ್ಲೂ ಪೂಜೆ ನಡೆಯುತ್ತದೆ. ಇನ್ನೂ ಪಟ್ಟಣ ಪ್ರದೇಶಗಳಲ್ಲಿ ಯಜಮಾನರು ಇರುವಂತಹ ಮುಖಂಡರ ಮನೆಗಳನ್ನು ಮೊದಲೇ ಆಯ್ಕೆ ಮಾಡಿಕೊಂಡಿರುತ್ತಾರೆ. ಇಂದಿಗೂ ಕೂಡ ಟಿ.ಬಿ. ಬಡಾವಣೆಯಲ್ಲಿ ಮಾದೇಶ್ವರನ ದೇವಸ್ಥಾನ  ಇರಬಹುದು, ಬಡಗುಡಮ್ಮನ ದೇವಸ್ಥಾನವಿರಬಹುದು ಯಾವುದೇ ಮುಜುಗರ ಸಂಕುಚಿತ ಭಾವನೆ ಇಲ್ಲದ ರೀತಿಯಲ್ಲಿ ಮೇಳ ಕಟ್ಟಿಕೊಂಡು ಆಯಾ ಮನೆಗಳ ಮುಂದೆ ಪೂಜೆ ಸಲ್ಲಿಸಿಕೊಂಡು ಯಥಾ ಸ್ಥಿತಿ ಸಾಯಂಕಾಲ ಭಾಗವಂತಿಕೆ ದಂಡು ಊರಿಗೆ ಹಿಂದಿರುಗುತ್ತದೆ.


ಕೋಡಂಗಿ ಮತ್ತು ಪಟಗಳನ್ನು ಊರಿಂದ ಹೊರಗೆ ಇಟ್ಟಿರುತ್ತಾರೆ.. ಪಟಗಳನ್ನೆಲ್ಲ ಆಲದ ಮರಕ್ಕೆ ನಿಲ್ಲಿಸಿ ಅಲ್ಲೇ ಕೋಡಂಗಿಯನ್ನು ಕೂರಿಸಿ ಒಂದು ಕಡೆ ಉತ್ಸವದ ತಯಾರಿಕೆ ನಡೆಯುತ್ತಿರುತ್ತದೆ. ಯಾವ ಮನೆಯಲ್ಲಿ ಪಟದ ಪೂಜೆ ನಡೆಯುತ್ತದೆಯೋ ಆ ಮನೆಯಿಂದ ಕಳಸ ಬರುತ್ತದೆ. ಕಳಸ ಬಂದ ನಂತರ ಉತ್ಸವ ತೆಗೆದುಕೊಂಡು ಬಂದು ಪಟಗಳನ್ನು ಇಟ್ಟಿರುವ ಜಾಗದಲ್ಲಿ ಪೂಜೆ ಸಲ್ಲಿಸಿ, ಕಪ್ಪು ಕಂಬಳಿಯನ್ನಿಟ್ಟು, ಕಂಬಳಿ ಮೇಲೆ ಕೊಡಂಗಿಗೆ ದಕ್ಷಿಣೆಯನ್ನಿಟ್ಟು ಪೂಜೆ ಮಾಡಿ, ನಂತರ ಊರೆಲ್ಲಾ ಮೆರವಣಿಗೆ ಮಾಡಿ, ರಾತ್ರಿಯೆಲ್ಲ ಮೆರವಣಿಗೆ ನಡೆಯುವುದುಂಟು. ಹೀಗೆ ಮೆರವಣಿಗೆ ಮುಗಿದು  ಮಹಾ ಮಂಗಳಾರತಿಯಾದ ನಂತರ ಕರಿಸೀಯುವುದು ನಡೆಯುತ್ತದೆ.(ದೃಷ್ಟಿಯಾಗದೇ ಇರಲಿ ಎಂದು ತಮಟೆ ನುಡಿಸುವವರ ಮುಖಾಂತರ ಕೋಳಿ ತಂದು ಕೊಯ್ದು ಸೀದು ಅದನ್ನು ಹೆಬ್ಬಾಗಿಲಿನ ಕಂಬಗಳಿಗೆ ಹಚ್ಚಿ ದೃಷ್ಟಿ ತೆಗೆದು ಭಾಗವಂತಿಕೆ ದಿನವನ್ನು ಸಮಾಪ್ತಿ ಮಾಡುತ್ತಾರೆ.


ಭಗವಂತಿಕೆ ಸಂಪ್ರದಾಯ ಜಾನಪದ ಸಂಪ್ರದಾಯದ ಒಂದು ಭಾಗವೇ ಆದರೂ ಭಾಗವಂತಿಕೆ ಸಾಹಿತ್ಯ ಎನ್ನುವುದು ಒಂದು ಪರಿಷ್ಕೃತ ಸಾಹಿತ್ಯ ಇದರಲ್ಲಿ ಎಲ್ಲಿಯೂ ವ್ಯಾಕರಣ ದೋಷವಿಲ್ಲದಂತೆ ಸಾಹಿತ್ಯದ ಮಡಿವಂತಿಕೆಯನ್ನು ಕಾಪಾಡಿಕೊಂಡು ಬಂದಿದೆ. ಅಲ್ಪಪ್ರಾಣ ಮಹಾಪ್ರಾಣದಲ್ಲಿ ಬಳಕೆಯ ವ್ಯತ್ಯಾಸವಾಗದ ರೀತಿಯಲ್ಲಿ ಈ ಸಾಹಿತ್ಯ ಇರುವುದು ಗಮನಾರ್ಹವಾದ ವಿಷಯ. ಹಳ್ಳಿಗಳಲ್ಲಿ, ಜಾನಪದದ ಸೊಗಡಲ್ಲಿ ಗ್ರಾಮ ದೇವತೆಯ ಹಾಡುಗಳನ್ನು ಕುರಿತು ಉಚ್ಚರಿಸುವಾಗ ವಿದ್ಯಾವಂತರಲ್ಲದ ಅವಿದ್ಯಾವಂತರ ನಡುವೆ ಕೆಲವೊಂದು ದೋಷಗಳಾಗಿರಬಹುದು, ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಯೋಚಿಸುವುದಾದರೆ ಇದು ಶಿಸ್ಟರೂಪದ ಪರಿಸ್ಕೃತ ಸಾಹಿತ್ಯವೇ ಸರಿ.


ಉಪ್ಪಾರಹಳ್ಳಿಯ ಭಾಗವಂತಿಕೆ ಕಲಾಮೇಳದಲ್ಲಿ ಮುಮ್ಮೇಳದಲ್ಲಿ ಆರು ಜನರಿದ್ದರೆ ಹಿಮ್ಮೇಳದಲ್ಲಿ ಆರು ಜನರು ಇರುತ್ತಾರೆ. ನಡುವೆ ಕೋಡಂಗಿ ಇರುತ್ತದೆ. ಕೋಡಂಗಿ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತದೆ. ಅಲ್ಲದೆ ಒಂದು ಚರಣ ಮುಗಿಯುತ್ತಿದ್ದಂತೆ ಏರುಧ್ವನಿ ಮತ್ತು ಕೆಳಧ್ವನಿಯಲ್ಲಿ ತೆಗೆದುಕೊಂಡು ಹೋಗುವ ಉದ್ವೇಗ, ಭಾವನೆ ನಮ್ಮನ್ನು ನಾವು ಈ ಭಾಗವಂತಿಕೆ ಹಾಡುಗಾರಿಕೆಯ ಕೈಂಕರ್ಯಕ್ಕೆ ತೊಡಗಿಸಿಕೊಳ್ಳುವ ರೀತಿ ಬರಿಮಾತಿನಲ್ಲಿ ಹೇಳಲಾಗದು. ಅದನ್ನು ಅನುಭವಿಸಿದಾಗಲೇ ತಿಳಿಯುವುದು. ಅನುಭವಿಸಿದವರ ಮನಸ್ಸು  ಪುನೀತವಾಗುವುದಂತೂ ನಿಜ.


ಊರಿನಲ್ಲೇನಾದರೂ ಮೈಲಿಗೆ, ಸಾವು ನೋವುಗಳು, ಪೂಜೆ ಮಾಡುವವರ ಮನೆಗಳಲ್ಲಿ ಗುರುತರನಾದ ಬದಲಾವಣೆಗಳಾದರೆ ಮಾತ್ರ ಒಂದು ವಾರ ಹಬ್ಬವನ್ನು ಮುಂದೂಡಲೂಬಹುದು. ವಿಷ್ಣು ದೀಪೋತ್ಸವಕ್ಕೂ ಭಾಗವಂತಿಕೆಗೂ ಕನಿಷ್ಠಪಕ್ಷ ಏಳು ದಿನಗಳ ಅಂತರವಿರಬೇಕು ಎಂಬುದು  ವಾಡಿಕೆ. ಮುಸ್ಸಂಜೆಯಲ್ಲಿ ದೀಪಾರಾಧನೆ,  ಅಟ್ನೆಚರ್ಪು  ನಡೆಯಬೇಕೆಂಬುದು ಕೂಡ ವಾಡಿಕೆ. ಒಂದು ವೇಳೆ ಊರಾಡುವ ಸಂದರ್ಭದಲ್ಲಿ ಮಳೆ ಹನಿ ಏನಾದರೂ ಬಂದು ದೇವರು ನೆನೆದರೆ ಇಲ್ಲಿಂದ ತೊಂಡನೂರು ಕೆರೆ ಅಥವಾ ಸೂಳೆಕೆರೆಗೆ ಹೋಗಿ ಅಲ್ಲಿ ಗಂಗಾ ಸ್ನಾನ ಮಾಡಿಸಿ ಮುತೈದೆಯರೊಂದಿಗೆ ಹೂವು, ಹೊಂಬಾಳೆಯಲ್ಲಿ ದೇವರನ್ನು ತಂದು ಉತ್ಸವ ಮಾಡತಕ್ಕಂಥದ್ದು ಕೂಡ ವಾಡಿಕೆ.


ಭಾಗವಂತಿಕೆ ಮುಗಿದ ದಿನ ವಿಷ್ಣು ದೀಪೋತ್ಸವಕ್ಕೆ ನಾಂದಿ ಆಗುವುದು ವಿಷ್ಣು ದೀಪೋತ್ಸವದ ನಾಂದಿಯ ದಿನವೂ ಕೂಡ ಕೋಡಂಗಿ ಒಂದು ಬಿಟ್ಟು ಭಾಗವಂತಿಕೆ ಮೇಳವು ಇರುತ್ತದೆ. ಕರಗ ಮಹೋತ್ಸವವೂ ಇರುತ್ತದೆ. ಕರಗವನ್ನು ದೇವಾಲಯದ ಮುಂದಿರುವ ಗರುಡಗಂಬದ ಮೇಲೆ ಮಡಗಿದ ನಂತರ ಆ ವರ್ಷದ ಭಾಗವಂತಿಕೆ ಆಚರಣೆ ಮತ್ತು ಮೇಳಕ್ಕೆ ಮುಕ್ತಾಯ ಹೇಳುತ್ತಾರೆ.


ಉಪ್ಪಾರಹಳ್ಳಿಯಲ್ಲಿ ನಗಾರಿ, ತಮಟೆ, ತಾಳಗಳನ್ನು ಭಾಗವಂತಿಕೆ ಮೇಳದಲ್ಲಿ ಬಳಸುತ್ತಾರೆ. ಬಸವ ಹಿಂದೆ ಇದ್ದು, ಇತ್ತೀಚೆಗೆ ಬಸವನ ಸಂಪ್ರದಾಯ ನಿಂತಿದೆ. ಇಲ್ಲಿ ಕೋಡಂಗಿ ಮಾತ್ರ ಕುಣಿಯುತ್ತದೆ ಉಳಿದವರು ಕುಣಿಯುವುದಿಲ್ಲ. ಭಾಗವತರು ಪಂಚೆ ಶರಟು ಕಡ್ಡಾಯವಾಗಿ ಧರಿಸುತ್ತಾರೆ. ಚಪ್ಪಲಿ ಹಾಕುವ ಹಾಗಿಲ್ಲ. ಕೋಡಂಗಿ ದೊಗಲೇ ಶರಟು, ಮೇಲೆ ಕೋಟು ಹಾಗೂ ಕಾಲಿಗೆ ಚಳ್ನ ಧರಿಸುತ್ತದೆ. ಕೈಯಲ್ಲಿ ಬಿಲ್ಲು ಹಿಡಿದಿರುತ್ತದೆ. ಸೆಣಬಿನಿಂದ ಮಾಡಿದ ಮೀಸೆ ಕಟ್ಟಿಕೊಂಡಿರುತ್ತದೆ. ಕಿರೀಟವಾಗಿ ಧರಿಸುವ ಚರ್ಮಕ್ಕೆ ರಾಗಿತೆನೆ, ಜೋಳದತೆನೆ, ಹುಚ್ಚಳ್ಳುಹೂವು, ಅಣ್ಣೆಹೂವು ಇವೆಲ್ಲವನ್ನೂ ಟೋಪಿಯ ತುದಿಗೆ ಕಟ್ಟಲಾಗಿರುತ್ತದೆ. ಕೋಡಂಗಿ ವೇಷ ಧರಿಸಲೆಂದೇ ಕೆಲವು ಕುಟುಂಬಗಳು ಮೀಸಲಿವೆ. ಅವರೇ ಕೋಡಂಗಿ ವೇಶ ಹಾಕುತ್ತಾರೆ. ಉಪ್ಪಾರರು ತಿರುಪತಿ ವೆಂಕಟರಮಣನ ಒಕ್ಕಲು. ಕಾರ್ತಿಕ ಮಾಸದ ಭಾಗವಂತಿಕೆ ಸಂದರ್ಭದಲ್ಲಿ ಉಪ್ಪಾರಹಳ್ಳಿಯಲ್ಲಿ ಆಹಾರ ಸಸ್ಯಾಹಾರವೇ ಆಗಿರುತ್ತದೆ. ಒಂದು ವೇಳೆ ಕಾರ್ತಿಕ ಮಾಸದಲ್ಲಿ ಯಾರಾದರೂ ಊರಿನವರು ಹೊರಗಡೆ ಮಾಂಸಾಹಾರ ಉಪಯೋಗಿಸಿದರೆ ಮನೆಗೆ ಬಂದು ಸ್ನಾನ ಮಾಡಿಕೊಳ್ಳುತ್ತಾರೆ. ದಾಸಪ್ಪ ಭಾಗವಂತಿಕೆ ಸಂಪ್ರದಾಯದ ಒಂದು ಭಾಗವಷ್ಟೇ. ಪ್ರಮುಖ ಸ್ಥಾನವೇನು ಅವರಿಗಿಲ್ಲ. ದೀವಟಿಗೆ ಸಲಾಂ ಅನ್ನು ದಾಸಪ್ಪನೇ ಮಾಡುತ್ತಾನೆ. ಮಡಿವಾಳರ ಪಾತ್ರ ಉಪ್ಪಾರಹಳ್ಳಿಯಲ್ಲಿ ಇಲ್ಲ.


“ಭಾಗವಂತಿಕೆ ಸಾಹಿತ್ಯ ಮೂಲದ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೇ”? ಎಂದಾಗ "ಖಂಡಿತವಾಗಿಯೂ ಇಲ್ಲ, ನನಗೂ ಕೂಡ ಇದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಒಂದು ರೀತಿಯ ಕೌತುಕವೂ ಹೌದು. ಶಂಕು, ಚಕ್ರ, ನಾಮ ಎನ್ನುವುದಕ್ಕೆಲ್ಲ ವಿವಿಧ ಅರ್ಥವನ್ನೇ ಅವರು ಹೇಳಿದ್ದಾರೆ. ಅಂದಮೇಲೆ ನಾವೇನು ಅವರಿಗಿಂತ ಮುಂದುವರಿದಿಲ್ಲ. ಬಹುಶಃ ಕಾಳಿದಾಸ, ಪುರಂದರದಾಸ, ಕನಕದಾಸರಂತಹ ಶ್ರೇಷ್ಠ ಕವಿಗಳ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಪ್ರೇರಣೆಯಾಗಿರಬಹುದು. ಏಕೆಂದರೆ ನಮ್ಮ ತರ್ಕಕ್ಕೆ ನಿಲುಕದಂತಹ ಎಷ್ಟೋ ಶಬ್ದಗಳು ಅವರ ಬರಹದಲ್ಲಿ ಬಂದಿವೆ. ಅವರ ಪ್ರೇರಣೆಗೆ ಯಾವುದೋ ಹಳ್ಳಿಗಳ ರೈತ ಮಹನೀಯ ಹೊಲ ಉಳುವವನ ಬಾಯಲ್ಲಿ, ಕೊಯ್ಲು ಮಾಡುವವನ ಬಾಯಲ್ಲಿ, ಪೂಜೆ ಮಾಡುವವನ ಬಾಯಲ್ಲಿ, ಹೊರಗಡೆ ನಿಂತು ಪರಾಕ್ ಹೇಳುವವನ ಬಾಯಲ್ಲಿ, ದೀವಟಿಗೆ ಸಲಾಂ ಮಾಡುವವನ ಬಾಯಲ್ಲಿ ಬರುವಂತಹ ಪದಗಳು ಅವನು ಉತ್ಪ್ರೇಕ್ಷೆಗೆ ಹೇಳುತ್ತಿದ್ದನೋ ಅಥವಾ ಇನ್ನೇನೋ ಮನಸ್ಸಿನಲ್ಲಿ ನೆನೆದು ಹೇಳುತ್ತಿದ್ದನೋ ಗೊತ್ತಿಲ್ಲ. ಇದು ಭಗವಂತನಿಗೆ ಬಿಟ್ಟ ವಿಚಾರ. ಆ ಶಬ್ದಗಳನ್ನು ಆರಿಸಿಕೊಂಡು ಯಕ್ಕಿ, ತಿರುಳನ್ನು ಭಾಗವಂತಿಕೆಗೆ ಹಾಡುಗಳಾಗಿ ಬಳಸಿಕೊಂಡರೇನೋ" ಎನ್ನುತ್ತಾರೆ. ವೆಂಕಟೇಶ್ ಉಪ್ಪಾರಹಳ್ಳಿ  


ಮೇಲಿನ ವಕ್ತೃಗಳ ಹೇಳಿಕೆಯನ್ನು ಗಮನಿಸಿದಾಗ ಕನಕದಾಸರು ಮತ್ತು ಪುರಂದರದಾಸರು ಜನರಿಗೆ ಮಾದರಿಯಾದರು ಎನ್ನುವುದಕ್ಕಿಂತ ಜನಪದವೇ ಪುರಂದರದಾಸರು ಹಾಗೂ ಕನಕದಾಸರ ಕೀರ್ತನೆಗಳಿಗೆ ಮಾದರಿಯಾಗಿರಲೂಬಹುದು. ಎನಿಸುತ್ತದೆ. "ಮಲ್ಲಿಕಾರ್ಜುನ ಸ್ವಾಮಿ ಎಲ್ಲಿ ನಲಿದ ಆಲತ್ತಿಯ ಬೆಟ್ಟದಲ್ಲಿ ನಲಿದ, ಎಂಬುದಾಗಲಿ ಶಂಕು, ಚಕ್ರ, ಹರಿ ನಾಟ್ಯವನಾಡಿದ ಎಂದು ಅಂದೆ ಜನಪದರು ಹೇಳುತ್ತಾರೆಂದರೆ, ʻಗೋಪಮ್ಮ ನಿನ್ನ ಮಗನಿಗೆ ಬುದ್ಧಿಯ ಹೇಳಿದರವ ಕೇಳುವನಲ್ಲʼ ಎಂಬಲ್ಲಿ ಗೋಪಮ್ಮ ಎಂಬುವಳು ಕೃಷ್ಣನ ತಾಯಿ ಎಂಬುದು ಅಂದೇ ಗೊತ್ತಿತ್ತು." ಎನಿಸುತ್ತದೆ.


ಇದೆಲ್ಲದರ ನಡುವೆ ನಮಗೆ ಒಂದಷ್ಟು ವ್ಯಥೆ ತರುವ ವಿಚಾರವೆಂದರೆ, ಹಿರಿಯ ತಲೆಮಾರಿನವರು ಒಂದಿಷ್ಟು ಬರೆದುಕೊಂಡಿರುವ ಸಾಹಿತ್ಯವಾಗಬಹುದು ಹಿರಿಯರು ಕಿರಿಯ ಹುಡುಗರನ್ನು ಸೇರಿಸಿಕೊಂಡು ತಾವು ಕಲಿತಿರುವುದನ್ನು ಕಲಿಸಿಕೊಡುವಂಥದ್ದಾಗಿರಬಹುದು, ಇದು ಆಗಬೇಕಾಗಿದೆ. ಆದರೆ ಕೆಲವೇ ಜನ ಆಸಕ್ತಿ ಇರುವಂತವರು ಮಾತ್ರ ಬರುತ್ತಾರೆ. ಆದರೆ ಯುವಕರು "ಹಿಂದೆ ತಪ್ಪೇಳುತ್ತಿದ್ದರು ಅದನ್ನು ಸರಿ ಮಾಡಿಕೊಳ್ಳೋಣ  ಸಾಹಿತ್ಯ ಕೊಡಿ ಎಂದು ಕೇಳಿದರೆ ಹಿರಿಯರು ಅದನ್ನು ಕೊಡಲು ಸಿದ್ದರಿಲ್ಲ. ಅವರೊಂದಿಗೆ ಅವರು ಕಲಿತಿರುವ ಅಥವಾ ತಾವು ಪ್ರತಿ ಮಾಡಿಸಿಕೊಂಡಿರುವ ಸಾಹಿತ್ಯವು ಕೂಡ ನಶಿಸಿ ಹೋಗುವುದೆಂಬುದೇ ನನಗೆ ವ್ಯಥೆ” ಎನ್ನುತ್ತಾರೆ ಉಪ್ಪಾರಹಳ್ಳಿಯ ವೆಂಕಟೇಶ್ ಅವರು.


ಇಷ್ಟೆಲ್ಲ ವೈಭವದ ಹಿನ್ನೆಲೆ ಇರುವ ಉಪ್ಪಾರಹಳ್ಳಿಯ ಭಾಗವಂತಿಕೆ ಸಂಪ್ರದಾಯ ನಾಡಿನಾದ್ಯಂತ ಪ್ರಸರಿಸದಿರಲು ಕಾರಣ, ಉಪ್ಪಾರರು ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳುವುದರಿಂದ ಕಾರ್ತಿಕ ಮಾಸದಲ್ಲಿ ಬಿಟ್ಟರೆ ಅವರು ಬೇರೆ ದಿನ ತಮ್ಮ ಕಟ್ಟುವ ಕಸುಬಿನಲ್ಲಿ ತೊಡಗಿಸಿಕೊಳ್ಳುವುದರಿಂದ ಇದು ಪ್ರಚಾರಕ್ಕೆ ಬರದಿರಲು ಕಾರಣವಿರಬಹುದು.


ನಾಗಮಂಗಲದ ಇತಿಹಾಸಕ್ಕೆ ಉಪ್ಪಾರಳ್ಳಿಯ ಇತಿಹಾಸ ಪೂರಕವಾಗಿದ್ದರು ಕೂಡ ಈ ಸತ್ಯ ಎಲ್ಲಿಯೂ ಮುನ್ನೆಲೆಗೆ ಬರದಿರುವುದು ವಿಪರ್ಯಾಸ ನಾಗಮಂಗಲದ ಗ್ರಾಮ ದೇವತೆ ಬಡಗುಡಮ್ಮನಾದರೆ, ಬಡಗುಡಮ್ಮನ ತವರೂರು ಉಪ್ಪಾರಹಳ್ಳಿ ಎಂಬುದು ಎಲ್ಲಿಯೂ ಪ್ರಸ್ತಾಪವಾಗುತ್ತಿಲ್ಲವೆಂದರೆ ಇದು ವಿಪರ್ಯಾಸ ಅಲ್ಲವೇ?


ಜನಪದ ಕಲೆ, ಸಾಹಿತ್ಯ ಕೇವಲ ತ್ರಿಪದಿಯ ರೂಪದಲ್ಲಿ ಇರುವುದಕ್ಕಷ್ಟೇ ಸೀಮಿತ ಆಗಬಾರದು. ಜನಪದ ಕಲೆ ಜನಗಳನ್ನ ಒಗ್ಗೂಡಿಸುವಂತಹ ನಿಟ್ಟಿನಲ್ಲಿ ಜನರನ್ನ ಸಂಘಟನೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಸಾಮರಸ್ಯ ಬೆಳಸಿ ಅದನ್ನು ಕಾಪಾಡುವ ನಿಟ್ಟಿನಲ್ಲಿ ಅಂದು ನಮ್ಮ ಹಿರಿಯ ತಲೆಮಾರಿನವರು ಹುಟ್ಟು ಹಾಕಿರುವ ಈ ತರಹದ ವಿವಿಧ ಜನಪದ ಕಲಾ ಪ್ರಕಾರಗಳಲ್ಲಿ ಒಂದಾದ ಭಾಗವಂತಿಕೆ ಪದಗಳನ್ನು ಕೂಡ ಜನಸಾಮಾನ್ಯರೊಂದಿಗೆ ಎಲ್ಲಾ ಕಡೆಗಳಲ್ಲೂ ಮೇಳೈಸಿ ಅದರ ತಿರುಳನ್ನು ಎಲ್ಲಾ ಸಮಾಜ ಸಮುದಾಯದವರು ಸವಿದರೆ ಭಾಗವಂತಿಕೆ ಕಲೆಗೆ ಒಂದು ಸತ್ವ ಬಂದಂತಾಗುವುದು.

Comments


bottom of page